ಮುಂಬಯಿ, ಆ.01: ಜೋಗೇಶ್ವರಿ ಪೂರ್ವದ ಕೇವ್ಸ್ ರಸ್ತೆಯಲ್ಲಿನ ಕೃಷ್ಣಾ ನಗರದ ಗುಂಫಾ ಟೆಕಡಿ ನಾರಾಯಣಗಿರಿ ಆಶ್ರಮ ಇಲ್ಲಿನ ಮಹಾನಗರ ಮುಂಬಯಿಯಲ್ಲಿನ ಏಕೈಕ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನದಲ್ಲಿ ಇಂದಿಲ್ಲಿ ಶುಕ್ರವಾರ ಸಂಭ್ರಮೋಲ್ಲಾಸದಿಂದ ನಾಗರಪಂಚಮಿ ಆಚರಿಸಲಾಯಿತು.
ಜಯ ನಾಮ ಸಂವತ್ಸರದ ಶ್ರಾವಣ ಮಾಸ ಶುಕ್ಲಪಕ್ಷ ಪಂಚಮಿಯ ದಿನವಾದ ಇಂದು ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಪಿ.ಸಿ ಜಯಪ್ರಕಾಶ್ ಭಟ್ ಅವರ ನೇತೃತ್ವದಲ್ಲಿ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಅಶ್ಲೇಷ ಬಲಿ, ನಾಗತನು, ನಾಗತಂಬಿಲ ಹಾಗೂ 108 ಸೀಯಾಳ ಅಭಿಷೇಕ, ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಸೇವೆ ನಡೆಸಲಾಯಿತು. ಮಧ್ಯಾಹ್ನ ಪ್ರಧಾನ ಮಹಾಪೂಜೆ ನೆರವೇರಿಸಿ ಮಹಾಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಆಶೀರ್ವಚಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಜಿ.ಟಿ.ಆಚಾರ್ಯ, ದೇವಸ್ಥಾನ ಸಮಿತಿಯ ವಿಶ್ವಸ್ಥ ಸದಸ್ಯರುಗಳಾದ ಮುದ್ದು ಸಿ.ಸುವರ್ಣ, ಸಂಜೀವ ಪಿ.ಪೂಜಾರಿ, ಹೆಚ್.ಬಾಬು ಪೂಜಾರಿ, ಶೇಖರ ಕಕೆ೯ರ, ಸೇವಾ ಸಮಿತಿ ಅಧಕ್ಷ ಸತೀಶ್ ದೇವಾಡಿಗ, ಉಪಾಧ್ಯಕ್ಷ ಅಶೋಕ್ ಆಚಾರ್ಯ, ಸಂಚಾಲಕ ಶಿವಪ್ರಸಾದ್ ಪೂಜಾರಿ, ಸಹ ಸಂಚಾಲಕ ರಾಘವೇಂದ್ರ ಶ್ಯಾನ್ಭಾಗ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಶೀನ ಪೂಜಾರಿ, ಸದಾಶಿವ ಕೋಟ್ಯಾನ್ ಸೇರಿದಂತೆ ಮಹಿಳಾ ಸದಸ್ಯೆಯರು ನೆರೆದು ವಿಶೇಷ ಪೂಜಾಧಿಗಳಲ್ಲಿ ಪಾಲ್ಗೊಂಡು ಭಕ್ತರ ಸೇವೆಗಳನ್ನು ನೆರವೆರಿಸಿದರು. ಸಾವಿರಾರು ಭಕ್ತರು ಆಗಮಿಸಿ ಪೂಜಾಧಿಗಳಲ್ಲಿ ಪಾಲ್ಗೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ನಾಗರ ದೇವರ ಕೃಪೆಗೆ ಪಾತ್ರರಾದರು.