ಕರ್ನಾಟಕ ಸಂಘ, ಮುಂಬಯಿ ; ಸಾಹಿತ್ಯ ಭಾರತಿ- ಸಾಹಿತ್ಯ ಚಿಂತನ -25
ಮುಂಬಯಿ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಕುರಿತು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಆದರೆ, ಅದು ಇಂದು ನಿನ್ನೆಯ ವಿದ್ಯಮಾನವಲ್ಲ. ನಾಲಿಗೆ ಕತ್ತರಿಸುವ, ಕಿವಿಗೆ ಕಾದ ಸೀಸ ಹೊಯ್ಯುವ ಶಿಕ್ಷೆ ರೂಢಿಯಲ್ಲಿದ್ದ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಅಭಿವ್ಯಕ್ತಿಯ ಮೇಲೆ ದಮನ ನಡೆಯುತ್ತಿರುವುದನ್ನು ಕಾಣಬಹುದು. ಬಹುತ್ವದ ಭಾರತದಲ್ಲಿ ಏನೂ ಮಾತನಾಡಿದರೂ ಅದು ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬರಹಗಾರರ ಜವಾಬ್ದಾರಿ ಹೆಚ್ಚಿದೆ ಎಂದು ಹೆಸರಾಂತ ಲೇಖಕಿ ವಿಮರ್ಶಕಿ ಡಾ. ಎಚ್. ಎಸ್. ಅನುಪಮಾ ಹೇಳಿದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಸಾಹಿತ್ಯ ಭಾರತಿ - ಸಾಹಿತ್ಯ ಚಿಂತನ -25 ರ ಕಾರ್ಯಕ್ರಮವು ನ.14 ರಂದು ಸಂಜೆ ಸಮರಸ ಭವನದಲ್ಲಿ ಜರಗಿದಾಗ ಅವರು ‘ ಕನ್ನಡ ಸಾಹಿತ್ಯ ಮತ್ತು ಅಭಿವ್ಯಕ್ತಿ’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು. ಬೆಂಗಳೂರು ನಾಗರತ್ನಮ್ಮ ಪ್ರಕಟಿಸಿದ ತೆಲುಗಿನ ಮುದ್ದು ಪಳನಿ ಬರೆದ ‘ರಾಧಿಕ ಸಾಂತ್ವನ’ ದಿಂದ ಹಿಡಿದು, ಕಳೆದ ತಿಂಗಳು ದಾವಣೆಗೆರೆಯ ಯುವ ಕವಿ ಹುಚ್ಚಂಗಿ ಪ್ರಸಾದ್ ಅವರ ‘ಒಡಲ ಕಿಚ್ಚು’ ಕವನ ಸಂಕಲನದ ತನಕ ಹಲವು ಪುಸ್ತಕ – ಮಾತು - ಪ್ರಕಟನೆಗಳು ಭಯಗೊಳಿಸಲ್ಪಟ್ಟಿವೆ. ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಧರ್ಮ ಮತ್ತು ಧರ್ಮದ ಹೆಸರಿನ ರಾಜಕಾರಣ ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡ ಗೋಡೆಯಾಗಿ ಪರಿಣಮಿಸಿವೆ. ಎಂ. ಎಂ. ಕಲಬುರ್ಗಿ ಅವರ ಮಾರ್ಗ, ಪಿ. ವಿ. ನಾರಾಯಣ ಅವರ ಧರ್ಮ ಕಾರಣ, ಎಚ್ ಎಸ್ ಶಿವಪ್ರಕಾಶ್ ಮಹಾಚೈತ್ರ, ಬಂಜೆಗೆರೆ ಜಯಪ್ರಕಾಶರ ‘ಅನುದೇವಾ ಹೊರಗಣವನು’, ಯೋಗೇಶ್ ಮಾಸ್ಟರ್ರ ‘ಡುಂಢಿ’, ಕೆ. ವೈ. ನಾರಾಯಣ ಸ್ವಾಮಿಯ ‘ಚಕ್ರ ರತ್ನ’ ಈ ಕೃತಿಗಳು ‘ಶಾಂತಿ ಮತ್ತು ಸುವ್ಯವಸ್ಥೆ’ ಕಾಪಾಡುವ ಸಲುವಾಗಿ ಪ್ರಜಾಪ್ರಭುತ್ವವಾದಿ ಸರಕಾರದೊಂದಿಗೆ ಕಾನೂನು ತೊಡಕು ಎದುರಿಸಿವೆ. ಸಂವಿಧಾನದ ಕಲಮು 19(1) ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದರೆ 19 (2) ಕಲಮು, ಅದರ ಜತೆ ಐಪಿಸಿ ಸೆಕ್ಷನ್ ನ 153 ಎ ಮತ್ತು ಬಿ, ಸೆ. – 256 -259 ಸೆಕ್ಷನ್ ಗಳು ಅಕ್ಷರಶಃ ಅಭಿವ್ಯಕ್ತಿಗೆ ತಡೆಗೋಡೆಗಳಾಗಿವೆ. ಇಡೀ ಸಮಾಜ ಕೆರಳಿದ ಸ್ಥಿತಿಯಲ್ಲಿರುವಾಗ ಅದನ್ನು ಜಾಗೃತ ಸ್ಥಿತಿಗೆ ಒಯ್ಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಇಂದಿನ ಬರವಣಿಗೆಯು ಬಹುತ್ವ ಮತ್ತು ಸಹಬಾಳ್ವೆಯ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿ ಹೊಂದಿಕೊಂಡು ಬಂದಿದೆ. ನಮ್ಮ ಸಂವಿಧಾನ ನಮ್ಮ ದೇಶದ ಪ್ರತಿ ಪ್ರಜೆಯ ಅವನ ಅಭಿವ್ಯಕ್ತಿಯನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯ ಕೊಟ್ಟಿದೆ. ಅದಕ್ಕೆ ಸಕಾರಣ ಮತ್ತು ಉಚಿತ ನಿಬಂಧನೆಗಳಿವೆ. ಅಭಿವ್ಯಕ್ತ ಸ್ವಾತಂತ್ರ್ಯ ಪ್ರಜಾಪ್ರಭುತ್ವದಲ್ಲಿ ಇದೆ ಎಂದರೆ ಅದು ಬುದ್ಧಿ ಜೀವಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಅರ್ಥ. ಅಂದರೆ ಅದು ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಇಂದು ಯೋಚಿಸಬೇಕಾಗಿದೆ. ದೇಶದೆಲ್ಲಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿರುವುದನ್ನು ನಾವೆಲ್ಲ ನೋಡುತ್ತಿŒದ್ದೇವೆ. ಮರಾಠಿ ಕವಿಯ ಕವಿತೆ ಗಾಂಧೀಜಿ ಬಗ್ಗೆ ವಿಶೇಷಾರ್ಥ ನೀಡಿ ಅದರಿಂದ ಗಾಂಧೀಜಿಯವರ ಹೆಸರಿಗೆ ಧಕ್ಕೆ ಬಂದಿದೆ ಎಂದು ಕವಿತೆಯನ್ನು ಮುಟ್ಟುಗೋಲು ಹಾಕಬೇಕೆಂದು ಕೇಸ್ ಹಾಕಲಾಗಿದೆ. ಬರಹ ಅಲ್ಲದೆ, ಸಂಘಟನೆ, ಪ್ರಸ್ತುತ ಸಮಾಜ ಎಲ್ಲವೂ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿದೆ. ಹಾಗಾಗಿ ನಿಜವಾದ ಧಾರ್ಮಿಕತೆಯನ್ನು ಹೇಳಿಕೊಡುವ ಗುರುಗಳು ಬೇಕು. ಬಳಿಕ ಮನುಷ್ಯರಾಗಿ ಬೇರೆಯವರಿಗೆ ತೊಂದರೆ ಕೊಡದೆ ಬದುಕುವುದು ನನ್ನ ಧರ್ಮ. ಅದು ನೈತಿಕತೆ ಎನ್ನುತ್ತಾ ದೊಡ್ಡ ಕಂದಕ ಕಂಠಕ ಧರ್ಮ ಮತ್ತು ಧರ್ಮದ ಜತೆಗೆ ಸೇರಿ ಕೊಂಡ ರಾಜಕಾರಣಿಗಳ ಇಚ್ಛೆಗೆ ಬಿಟ್ಟು ಅದು ಇಂದು ದೊಡ್ಡ ಕಂಠಕ ಎಂದರು.
ಕಾರ್ಯಕ್ರಮವನ್ನು ಸಂಘದ ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ನಿರೂಪಿಸಿ ವಂದಿಸಿದರು.
ಉಪನ್ಯಾಸಕಿ ಡಾ. ಎಚ್. ಎಸ್. ಅನುಪಮಾ ಅವರಿಗೆ ಕರ್ನಾಟಕ ಸಂಘದ ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಮಾಜಿ ಉಪಾಧ್ಯಕ್ಷ ಡಾ. ಭರತ್ ಕುಮಾರ್ ಪೆÇಲಿಪು, ಗೌ. ಕೋಶಾಧಿಕಾರಿ ಎಂ. ಡಿ ರಾವ್ ಶಾಲು ಹೊದಿಸಿ, ಸ್ಮರಣಿಕೆ ಪುಸ್ತಕ ಗುಚ್ಛನೀಡಿ ಗೌರವಿಸಿದರು. ಉಪನ್ಯಾಸದ ನಂತರ ಸಂವಾದ ನಡೆದು ಸೂಕ್ತ ಉತ್ತರವನ್ನು ಡಾ. ಎಚ್. ಎಸ್. ಅನುಪಮಾ ನೀಡಿದರು.