ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕೃಷಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭತ್ತ ಖರೀದಿ ಕೇಂದ್ರ ಸ್ಥಾಪಿಸುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾರದೊಳಗೆ ಕಾರ್ಯಾರಂಭ
ಆಹಾರ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಡಾ| ದಾಸೇಗೌಡ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ಮೂಡಬಿದಿರೆ, ಬಂಟ್ವಾಳ ಹಾಗೂ ಬೆಳ್ತಂಗಡಿಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಒಂದು ವಾರದೊಳಗೆ ಕೇಂದ್ರ ಕಾರ್ಯಾರಂಭ ಮಾಡಲಿದೆ. ಆಸಕ್ತ ರೈತರು ಖರೀದಿ ಕೇಂದ್ರಕ್ಕೆ ಆಗಮಿಸಿ ಭತ್ತ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಎ ಗ್ರೇಡ್ ಭತ್ತಕ್ಕೆ ಬೆಂಬಲ ಬೆಲೆ ಸೇರಿ 1,560 ರೂ. ಹಾಗೂ ಸಾಮಾನ್ಯ ಭತ್ತಕ್ಕೆ 1,510 ರೂ. ದರ ನಿಗದಿ ಮಾಡಲಾಗಿದ್ದು, ಮಾರುಕಟ್ಟೆ ದರಕ್ಕಿಂತ ಇದು ಉತ್ತಮವಾಗಿದೆ. ರೈತರಿಗೂ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಕೆಂಪೇಗೌಡ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ರೈತರು ಭತ್ತ ಮಾರಾಟಕ್ಕೆ ಮುಂದಾಗುತ್ತಿಲ್ಲ. ಇಲ್ಲಿ ರೈತರು ಸ್ವ ಉಪಯೋಗಕ್ಕೆ ಹೆಚ್ಚಿನ ಭತ್ತವನ್ನು ಉಪಯೋಗಿಸುತ್ತಿರುವುದರಿಂದ ಮಾರಾಟ ಮಾಡುವ ಮನಸ್ಸು ಮಾಡುತ್ತಿಲ್ಲ. ಈ ಬಾರಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ ಭತ್ತ ಮಾರಾಟಕ್ಕೆ ಪ್ರೋತ್ಸಾಹಿಸಲಾಗುವುದು ಎಂದು ಅವರು ವಿವರಿಸಿದರು.
ದೃಢೀಕರಣ ಪತ್ರ ಅಗತ್ಯ
ಭತ್ತ ಮಾರಾಟಕ್ಕೆ ಬರುವ ರೈತರು ಆರ್ಟಿಸಿ ಜತೆಯಲ್ಲಿ 2015-16ನೇ ಸಾಲಿನಲ್ಲಿ ಭತ್ತ ಬೆಳೆದಿರುವ ಬಗ್ಗೆ ಗ್ರಾಮ ಕರಣಿಕರಿಂದ ದೃಢೀಕರಣ ಪತ್ರ ಪಡೆದು ತರಬೇಕು. ಅಲ್ಲದೇ ಬ್ಯಾಂಕ್ ಖಾತೆ ವಿವರಗಳನ್ನೊಳಗೊಂಡ ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿಯನ್ನು ನೀಡಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.