ಮಂಗಳೂರು: ದ್ವಿಚಕ್ರ ವಾಹನದಲ್ಲಿ ಇರಿಸಲಾದ ನಗದು, ರಿಚಾರ್ಜ್ ಕರೆನ್ಸಿ ಇದ್ದ ಬ್ಯಾಗನ್ನು ಕಳವು ಮಾಡಿರುವ ಘಟನೆ ಮಂಗಳೂರಿನ ವೆಲೆನ್ಸಿಯಾದಲ್ಲಿ ಗುರುವಾರ ನಡೆದಿದೆ.
ವಾಲ್ಟರ್ ಡಿ'ಸೋಜ ಎಂಬುವರು ವೆಲೆನ್ಸಿಯಾದ ಸಿಕ್ವೇರಾ ಕೋರ್ಟ್ ಬಿಲ್ಡಿಂಗ್ನಲ್ಲಿ ಮೊಬೈಲ್ ರಿಚಾರ್ಜ್ ಅಂಗಡಿಯನ್ನು ಹೊಂದಿದ್ದು, ರಾತ್ರಿ ಅಂಗಡಿಯನ್ನು ಬಂದ್ ಮಾಡುವ ವೇಳೆ ನಗದು ಮತ್ತು ರಿಚಾರ್ಜ್ ಕರೆನ್ಸಿ ಇದ್ದ ಬ್ಯಾಗನ್ನು ದ್ವಿಚಕ್ರ ವಾಹನದ ಮೇಲೆ ಇರಿಸಿ, ಅಂಗಡಿಯ ಶಟರ್ ಹಾಕಲು ಮರಳಿ, ಬೀಗ ಹಾಕಿ ನೋಡಿದಾಗ ದ್ವಿಚಕ್ರ ವಾಹನದ ಮೇಲೆ ಇರಿಸಿದ್ದ ಬ್ಯಾಗ್ ಕಳವಾಗಿತ್ತು.ಬ್ಯಾಗ್ನಲ್ಲಿ 80 ಸಾವಿರ ರೂ. ನಗದು, 25 ಸಾವಿರ ರೂ. ಮೌಲ್ಯದ ರಿಚಾರ್ಜ್ ಕರೆನ್ಸಿ ಇತ್ತು ಎನ್ನಲಾಗಿದೆ. ಈ ಕುರಿತು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.