ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲದ ಬೋಳಿಯಾರು ಗ್ರಾಮದಲ್ಲಿ ಮಾನವಾಕೃತಿಯ ವಿಚಿತ್ರಪ್ರಾಣಿಯೊಂದು ರಾತ್ರಿ ವೇಳೆ ಸಂಚರಿ ಸುತ್ತಿದ್ದು ಭಯದ ವಾತಾವರಣ ಸೃಷ್ಟಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳೂರಿನ ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಏಲಿಯನ್ನಾ? ಅಥವಾ ಇನ್ಯಾವುದೋ ವಿಚಿತ್ರ ಪ್ರಾಣಿಯಾ? ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ.ದಟ್ಟ ಅರಣ್ಯದಿಂದ ಕೂಡಿರುವ ಬೋಳಿಯಾರು ಗ್ರಾಮದ ಕಾಂಪಾಡಿ ಹಾಗೂ ಬಡಕಿನ ಕಟ್ಟೆಯಲ್ಲಿ ಕೆಲವು ದಿನಗಳಿಂದ ಈ ಜೀವಿ ಭಾರೀ ಆತಂಕ ಸೃಷ್ಟಿಸಿದೆ
. ಕೆಲವೊಮ್ಮೆ ನಾಲ್ಕು ಕಾಲುಗಳಿಂದ, ಕೆಲವು ಸಲ ಎರಡು ಕಾಲುಗಳಿಂದ ಜನರನ್ನು ಬೆನ್ನಟ್ಟಿ ಬರುವ ಈ ವಿಚಿತ್ರ ಜೀವಿಯ ಕುರಿತು ಹತ್ತಾರು ಕಥೆಗಳು ಹುಟ್ಟಿಕೊಂಡಿವೆ.ಕಳೆದ ಒಂದು ವಾರದಿಂದ ರಾತ್ರಿಯಾಗುತ್ತಿದ್ದಂತೆ ಪಕ್ಕದ ಕಾಡಿನಿಂದ ಏಕಾಏಕಿ ಊರಿಗೆ ಬರುವ ಈ ಜೀವಿ ಚಿಕ್ಕ ಮಕ್ಕಳು ಜೋರಾಗಿ ಕಿರುಚುವಂತೆ ಏರು ಧ್ವನಿಯಲ್ಲಿ ಚೀರುತ್ತಾ ಸಂಚರಿಸುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ಈ ಜೀವಿಯನ್ನು ಪತ್ತೆ ಮಾಡಲು ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.