ಮಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಕುರಿತಂತೆ ಆತ್ಮಹತ್ಯೆಗೈದ ಶ್ಯಾಮಪ್ರಸಾದ್ ಶಾಸ್ತ್ರಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬೆದರಿಕೆ ಕರೆ ಮಾಡಿದ್ದರು ಎಂಬ ಬಗ್ಗೆ ದೃಢ ಸಾಕ್ಷಿ ಸಿಕ್ಕಿರುವುದಾಗಿ ಸಿಐಡಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಗಾಯಕಿಯಾಗಿದ್ದ ಪ್ರೇಮಲಾತಾ ಎಂಬಾಕೆಯ ಮೇಲೆ ರಾಘವೇಶ್ವರ ಸ್ವಾಮಿ ನಿರಂತರ ಅತ್ಯಾಚಾರ ನಡೆಸಿರುವುದಾಗಿ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಸ್ವಾಮೀಜಿಯ ಅನುಯಾಯಿಗಳು ಪ್ರೇಮಲತಾ ಸ್ವಾಮೀಜಿ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.ಪ್ರೇಮಲತಾರ ಪತಿ ದಿವಾಕರ ಶಾಸ್ತ್ರಿಯವರ ಸಹೋದರನಾಗಿರುವ ಶ್ಯಾಮಪ್ರಸಾದ್ ಶಾಸ್ತ್ರಿಯವರು ತಮ್ಮ ಸಹೋದರ ಮತ್ತು ಸ್ವಾಮಿ ಭಕ್ತರ ಮಧ್ಯೆ ಸಿಲುಕಿ ತೀವ್ರ ಒತ್ತಡಕ್ಕೀಡಾಗಿದ್ದರು.
ಸೆಪ್ಟಂಬರ್ 2014ರಲ್ಲಿ ಅವರು ಪುತ್ತೂರಿನ ಬಡೆಕ್ಕಿಲದಲ್ಲಿರುವ ತಮ್ಮ ಮನೆಯಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಶ್ಯಾಮಪ್ರಸಾದ್ ಆತ್ಮಹತ್ಯೆಗೂ ಮುನ್ನ ಕಲ್ಲಡ್ಕ ಪ್ರಭಾಕರ ಭಟ್ ಶ್ಯಾಮ್ ಪ್ರಸಾದ್ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ತಂಡ ಶ್ಯಾಮಪ್ರಸಾದ್ ಶಾಸ್ತ್ರಿಯವರ ಮೊಬೈಲ್ ಡಿಟೈಲ್ಸ್ ಪರಿಶೀಲಿಸಿದಾಗ ಕಲ್ಲಡ್ಕ ಭಟ್ ಶ್ಯಾಮಪ್ರಸಾದ್ ಗೆ ಕರೆ ಮಾಡಿರುವುದು ಸಾಬೀತಾಗಿತ್ತು. ಈಗ ಫೊರೆಂಸಿಕ್ ಲ್ಯಾಬ್ ರಿಪೋರ್ಟ್ ಆ ಕರೆಯಲ್ಲಿ ಮಾತನಾಡಿರುವ ಧ್ವನಿ ಕಲ್ಲಡ್ಕ ಪ್ರಭಾಕರ್ ಭಟ್ ರದ್ದೇ ಎಂದು ದೃಢಪಡಿಸಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಯಾವುದೇ ಕ್ಷಣದಲ್ಲಾದರೂ ಸಿಐಡಿ ಅಧಿಕಾರಿಗಳು ಪ್ರಭಾಕರ್ ಭಟ್ ರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.