ಮಂಗಳೂರು: ಏಷ್ಯಾದಲ್ಲೇ ಪ್ರಥಮ 'ಮುಖ್ಯಮಂತ್ರಿ ಸಾಂತ್ವನ ಯೋಜನೆ'ಗೆ ಜ. 8ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.ಮಂಗಳೂರಿನ ಸರ್ಕೀಟ್ಹೌಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಘಾತಕ್ಕೀಡಾದ ವ್ಯಕ್ತಿಗೆ 48 ಗಂಟೆ ಅವಧಿಗೆ ಗರಿಷ್ಠ 25,000 ರೂ. ವರೆಗಿನ ಚಿಕಿತ್ಸೆಯನ್ನು ಮಾನವೀಯ ನೆಲೆಯಲ್ಲಿ ಒದಗಿಸುವ 'ಮುಖ್ಯಮಂತ್ರಿ ಸಾಂತ್ವನ ಯೋಜನೆ'ಗೆ 72 ಕೋಟಿ ರೂ.ಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 10 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ.
ಈ ಯೋಜನೆ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರಕಾರದ ಜತೆಗೆ ನೋಂದಾಯಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಗೃಹ ಹಾಗೂ ಸಾರಿಗೆ ಸಚಿವಾಲಯಗಳ ಜತೆ ಜಂಟಿ ಸಭೆ ನಡೆಸಲಾಗುವುದು. ಈ ಯೋಜನೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಮನ್ ಕಿ ಬಾತ್'ನಲ್ಲಿ ಪ್ರಸ್ತಾವಿಸಿದ್ದಾರೆ. ಈ ಯೋಜನೆಯನ್ನು ಕೇಂದ್ರ ಸರಕಾರ ಕೂಡ ದೇಶಾದ್ಯಂತ ಅನುಷ್ಠಾನಗೊಳಿಸುವ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.