ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 8 ಮಂದಿ ವಿಕ್ಕಿ ಶೆಟ್ಟಿ ಸಹಚರರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.
ಇಂದು ಬೆಳಗ್ಗೆ ಮಂಗಳೂರಿನ ಕಾವೂರು ಮರಕಡದಲ್ಲಿ ದರೋಡೆಗೆ ಹೊಂಚು ಹಾಕಿ ಕಾಯುತ್ತಿದ್ದ 6 ಮಂದಿ ವಿಕ್ಕಿ ಶೆಟ್ಟಿ ಸಹಚರರನ್ನು ಬಂಧಿಸಲಾಗಿದ್ದು ಬಂಧಿತರಿಂದ ಒಂದು ಪಿಸ್ತೂಲ್, 5 ಸಜೀವ ಗುಂಡು, ಎರಡು ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ. ಬಂಧಿತರನ್ನು ಬಜಾಲ್ ನಿವಾಸಿ ಗೌರೀಶ್, (26), ಕಾವೂರು ನಿವಾಸಿ ಜಯೇಶ್ (23), ಆಕಾಶಭವನ ನಿವಾಸಿ ನವೀನ್ ಶೆಟ್ಟಿ (34), ಬಂಟ್ವಾಳ ನಿವಾಸಿ ಪ್ರವೀಣ್ ಕುಮಾರ್ (26), ಕುಲಶೇಖರ್ ನಿವಾಸಿ ಹರ್ಷಿತ್ (22) ಮತ್ತು ಬಜಾಲ್ ನಿವಾಸಿ ಗುರುಪ್ರಸಾದ್ (30) ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ ಜಯೇಶ್, ನವೀನ್ ಮತ್ತು ಪ್ರವೀಣ್ ಈ ಹಿಂದೆ ನಗರದ ಕಂಕನಾಡಿ ವಲೆನ್ಸಿಯಾದಲ್ಲಿ ನಡೆದ ಪ್ರಶಾಂತ್ ಹತ್ಯೆಯಲ್ಲಿ ಭಾಗಿಯಾಗಿದ್ದರು. ಗೌರೀಶ್, ಹರ್ಷಿತ್ ಮತ್ತು ಗುರುಪ್ರಸಾದ್ ಇತ್ತೀಚೆಗೆ ತೊಕ್ಕೊಟ್ಟುವಿನಲ್ಲಿ ನಡೆದ ವಿಕ್ಕಿ ಬೋಳಾರ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ಮಂಗಳೂರಿನ ಕೀರ್ತಿ ಮಹಲ್ ಲಾಡ್ಜ್ನಲ್ಲಿ ನಾಡ ಪಿಸ್ತೂಲ್ ಒಂದನ್ನು ಅನಧಿಕೃತವಾಗಿ ಇರಿಸಿದ್ದ ಆಪಾದನೆಯ ಮೇರೆಗೆ ವಿಕ್ಕಿ ಶೆಟ್ಟಿ ಸಹಚರರಾದ ಬಿಜೈ ನಿವಾಸಿ ಸಚಿನ್ ಗೌಡ (31) ಮತ್ತು ಶಕ್ತಿನಗರ ನಿವಾಸಿ ಪವನ್ ಶೆಟ್ಟಿ (21) ಎಂಬುವರನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.