ಮಂಗಳೂರು: ಕಾರು ಮರಕ್ಕೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯ ತಿಬ್ಲಪದವು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.ಮೃತರನ್ನು ಮುಮ್ತಾಜ್ ಎಂದು ಗುರುತಿಸಲಾಗಿದ್ದು, ಕೊಣಾಜೆ ವೊರ್ಕರೆಗುಡ್ಡೆ ನಿವಾಸಿಗಳಾದ ಒಂದೇ ಕುಟುಂಬದ ಕಾರು ಚಲಾಯಿಸುತ್ತಿದ್ದ ಮಹಮ್ಮದ್ ಅಸ್ಫಪಹಾನ್(25) ಪ್ರಯಾಣಿಕರಾಗಿದ್ದ ಶಿಫಾನ ಪರ್ವೀನ್ (17), ಶಮೀರಾ (35), ಇಶಾನಾ(13) ಎಂಬವರು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೊಣಾಜೆ ವೊರ್ಕರೆಗುಡ್ಡೆಯಿಂದ ಸೋಮೇಶ್ವರ ಉಚ್ಚಿಲದ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ತಿಬ್ಲಪದವು ಬಳಿ ಎದುರುಗಡೆಯಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಎಡಬದಿಯಲ್ಲಿ ಇದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಂದು ಬಾಗಿಲು ಕೆಲ ಕಿ.ಮೀ ದೂರ ಬಿದ್ದಿತ್ತು. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.