ಉಳ್ಳಾಲ: ಜನನ ಮತ್ತು ಮರಣ ಎಂಬುದರ ಮಧ್ಯೆ ಇರುವ ಜೀವನದಲ್ಲಿ ನಾವು ಮಾಡಿದ ಸಾಧನೆ ಇತರರ ಮನದಲ್ಲಿ ನೆಲೆನಿಲ್ಲುವಂತಾಗುತ್ತದೆ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಬ್ಯಾರಿ ಕಲಾವಿದರು ಹಾಗೂ ಬರಹಗಾರರ ಒಕ್ಕೂಟ `ಮೇಲ್ತೆನೆ' ಆಶ್ರಯದಲ್ಲಿ ಭಾನುವಾರ ದೇರಳಕಟ್ಟೆ ತಾಜುಲ್ ಉಲಮಾ ಸೆಂಟರ್ನಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಗಾಗಿ ನಡೆದ ಹಾಡು, ಪ್ರಬಂಧ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆಲ್ಲಾ ಬ್ಯಾರಿ ಎಂದರೆ ಇದ್ದಂತಹ ಕೀಳರಿಮೆ ಇಂದು ದೂರವಾಗಲು ವಿವಿಧ ಬ್ಯಾರಿ ಸಂಘಟನೆಗಳ ಕಾರ್ಯಕ್ರಮಗಳು ಕಾರಣ, ಅಲ್ಲದೆ ಬ್ಯಾರಿ ಎನ್ನುವುದು ಸಂಸ್ಕøತಿ ಎನ್ನುವ ಭಾವನೆ ಮೂಡುವಂತಾಗಿದೆ ಎಂದು ಕೆಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷ ವಲೇರಿಯನ್ ಡಿಸೋಜ ಅಭಿಪ್ರಾಯಪಟ್ಟರು.
ಬ್ರೈಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜಲೀಲ್ ಮೊಂಟೆಪದವು ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ದೂರದೃಷ್ಟಿತ್ವ ಹಾಗೂ ಗುರಿ ಇರಬೇಕು. ಮುಂದೊಂದು ದಿನ ದೊಡ್ಡ ಹಾಗೂ ಗೌರವಾನ್ವಿತ ಹುದ್ದೆಯ ಬಗ್ಗೆ ಕನಸು ಕಂಡು ಅದಕ್ಕಾಗಿ ಕಾರ್ಯನಿರತವಾಗಬೇಕು, ಮಂಗಳೂರಿನಲ್ಲೇ ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳ ಸೃಷ್ಟಿಯಾಗಬೇಕು ಎಂದು ತಿಳಿಸಿದರು.
ಮೇಲ್ತೆನೆ ಅಧ್ಯಕ್ಷ ಆಲಿಕುಂಞÂ ಪಾರೆ ಅಧ್ಯಕ್ಷತೆ ವಹಿಸಿದ್ದರು. ಕನೆಕೆರೆ ಮಸೀದಿ ಇಮಾಮ್ ಇಸ್ಹಾಕ್ ಝುಹ್ರಿ ಉಪನ್ಯಾಸ ನೀಡಿದರು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ನಾಟೆಕಲ್, ಉದ್ಯಮಿ ಏಷ್ಯನ್ ಅಹ್ಮದ್ ಬಾವ ಮುಖ್ಯ ಅತಿಥಿಗಳಾಗಿದ್ದರು.
ಮೇಲ್ತೇನೆಯ ರಫೀಕ್ ಪಾನೇಲ, ಮಹಮ್ಮದ್ ಮಾಸ್ಟರ್ ಕಲ್ಕಟ್ಟ, ಬಶೀರ್ ಅಹ್ಮದ್ ಕಿನ್ಯ, ಎಂ.ಆರೀಫ್ ಕಲ್ಕಟ್ಟ, ಮಹಮ್ಮದ್ ಮಾಸ್ಟರ್ ಮಲಾರ್, ಬಶೀರ್ ಕಲ್ಕಟ್ಟ, ಇಸ್ಮಾಯಿಲ್ ಮಾಸ್ಟರ್ ನಾಟೆಕಲ್ ತೀರ್ಪುಗಾರರಾಗಿದ್ದರು.
ಹಾಡುಗಾರಿಕೆಯಲ್ಲಿ ನೌಶೀರ್ ಪ್ರಥಮ, ಮಹ್ಶೂಮ್ ದ್ವಿತೀಯ ಹಾಗೂ ಶಫೀಕ್ ತೃತೀಯ ಸ್ಥಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಅಬ್ರಾರ್ ಪ್ರಥಮ, ನಬೀಲ್ ದ್ವಿತೀಯ ಹಾಗೂ ಮಹಮ್ಮದ್ ಸಾಹಿಲ್ ಪಜೀರ್ ತೃತೀಯ ಸ್ಥಾನ ಪಡೆದರು.
ಮೇಲ್ತೆನೆ ಸಂಚಾಲಕ ಹಂಝ ಮಲಾರ್ ಸ್ಪರ್ಧೆಯ ನಿಯಮ ಮನವರಿಕೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮತ್ ಪಜೀರ್ ಸ್ವಾಗತಿಸಿದರು. ಶಿಹಾಬ್ ದೇರಳಕಟ್ಟೆ ವಂದಿಸಿದರು. ಕಾರ್ಯದರ್ಶಿ ಅನ್ಸಾರ್ ಇನೋಳಿ ಕಾರ್ಯಕ್ರಮ ನಿರ್ವಹಿಸಿದರು.