ಮೈಸೂರು ಜಿಲ್ಲೆಯ ಕೃಷ್ಣರಾಜನಗರದ “ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿ”ಗಳವರು 10.01.2016 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಚಿತ್ತೈಸಿ, ಇಲ್ಲಿ ನಡೆದ ಧಾರ್ಮಿಕ ಸತ್ಸಂಗದಲ್ಲಿ ಆಶೀರ್ವಚನ ನೀಡಿದರು.. ವೇದ ಓದದಿದ್ದರೂ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅನ್ನಂ ನ ನಿಂದ್ಯಾತ್ ಮುಂತಾದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೆಲ್ಲರೂ ವೈದಿಕರೇ ಆಗಿದ್ದಾರೆ. ಹಣದಿಂದ ಕೊಳ್ಳಲು ಸಾಧ್ಯವಿಲ್ಲದ ನಮ್ಮ ಸಂತೋಷ ನೆಮ್ಮದಿಯನ್ನು ನಾವೇ ಕಂಡುಕೊಳ್ಳಬೇಕಿದೆ. 1200 ವರುಷಗಳ ಹಿಂದೆ ಆದ್ಯ ಶಂಕರಾಚಾರ್ಯರು ಹೇಳಿದ ಪರಮಾತ್ಮ ನಮ್ಮೆಲ್ಲರ ಒಳಗಿದ್ದಾನೆ ಅನ್ನುವ ಭಾವನೆಯಿಂದ ದ್ವೇಷ ರಹಿತರಾಗಿ ಪ್ರೀತಿಯಿಂದ ಎಲ್ಲರೂ ಒಂದಾಗಿ ಬಾಳೋಣ ಎಂದು ಅವರು ಆಶೀರ್ವದಿಸಿದರು.
ಕೊಂಡೆವೂರಿನ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು “ಗುರುಗಳ ಶ್ರೇಷ್ಠ ಸಂದೇಶ ಕೇಳುತ್ತ ಜ್ಞಾನದ ಮಾರ್ಗ ಅನುಸರಿಸಿ, ನಮ್ಮ ಜನ್ಮವನ್ನು ಭಗವಂತನ ಪ್ರೀತ್ಯರ್ಥವಾಗಿ ಯಜ್ಞಮಯಗೊಳಿಸಬೇಕು” ಎಂದು ಕರೆನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಯೋಗಾಶ್ರಮದ ವಿಶ್ವಸ್ಥ ಶ್ರೀ ಗೋಪಾಲ್ ಬಂದ್ಯೋಡು ರವರು ಯಡತೊರೆ ಶ್ರೀಗಳವರನ್ನು, ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಯವರು ಪೂಜ್ಯ ಗುರೂಜಿಯವರನ್ನು ಫಲ ತಾಂಬೂಲ ನೀಡಿ ಸ್ವಾಗತಿಸಿದರು.
ಶ್ರೀ ನಿತ್ಯಾನಂದ ಯೋಗಾಶ್ರಮದ ದ್ವಾರದಿಂದ ಪೂರ್ಣಕುಂಭ ಸ್ವಾಗತದಲ್ಲಿ ಶಂಖ ಜಾಗಟೆ ಚೆಂಡೆ ವಾದನಗಳೊಡನೆ ಭವ್ಯ ಮೆರವಣಿಗೆಯಲ್ಲಿ ಶ್ರೀಗಳವರನ್ನು ಆಶ್ರಮಕ್ಕೆ ಬರಮಾಡಿಕೊಂಡು, ಭಜನೆಯೊಂದಿಗೆ ಸತ್ಸಂಗ ಆರಂಭವಾಯಿತು.