ಮಂಗಳೂರು:‘ ನನಗೆ ೬೦ ವರ್ಷವಾದಾಗ ಪಿಎಂ ಅಥವಾ ಸಿಎಂ ಆಗುತ್ತೇನೆ. ಸದ್ಯ ದೇಶದ ರಾಜಕೀಯ ಪರಿಸ್ಥಿತಿ ಚೆನ್ನಾಗಿಲ್ಲ. ಹಾಗಾಗಿ ನಾನೇ ಸ್ವತಂತ್ರ ಪಕ್ಷ ಕಟ್ಟಲಿದ್ದು, ಮೂರು ತಿಂಗಳೊಳಗೆ ಪಕ್ಷದ ಲಾಂಛನ ಬಿಡುಗಡೆಗೊಳಿಸಲಿದ್ದೇನೆ. ಅಲ್ಲದೇ ಮುಂದಿನ ಚುನಾವಣೆಗಳಲ್ಲಿ ಕನಿಷ್ಟ ಒಂದು ಸ್ಥಾನವನ್ನಾದರೂ ಗೆದ್ದೇ ಗೆಲ್ಲುತ್ತೇನೆ’.ಇದು ಪೈರಿಂಗ್ ಸ್ಟಾರ್ ಹುಚ್ಚ ವೆಂಕಟೇಶ್ ಅವರ ಮನದಾಳದ ಮಾತು. ಭಾನುವಾರದಂದು ಮಂಗಳೂರಿನ ಸುಚಿತ್ರಾ ಥಿಯೇಟರ್ ಗೆ ತಮ್ಮ ಸಿನಿಮಾ `ಸ್ವತಂತ್ರ ಪಾಳ್ಯ'ದ ಪ್ರಚಾರಾರ್ಥವಾಗಿ ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು,ನಾನು ಮೂರು ವರ್ಷದವನಿದ್ದಾಗ ಮಂಗಳೂರಿನಲ್ಲಿ ನೆಲೆಸಿದ್ದೆ.
ಹಾಗಾಗಿ ನನಗೆ ಮಂಗಳೂರು ಜನತೆ ಎಂದರೆ ಅಪಾರ ಪ್ರೀತಿ. ಆದ್ರೆ ಇಂದು ಸಿನಿಮಾ ವೀಕ್ಷಣೆಗೆ ಕಡಿಮೆ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಬೇಸರವಾಗಿದೆ ಎಂದರು.ಈ ವರ್ಷದಲ್ಲಿ ನಾನು ನಟಿಸಿರುವ ಮೂರು ಸಿನಿಮಾಗಳು ತೆರೆಕಾಣಲಿವೆ. ಪರಭಾಷೆಯಲ್ಲಿ ನಟಿಸಬೇಕೆಂಬ ಆಸೆ ನನಗಿಲ್ಲ ಮತ್ತು ನಾನೆಂದೂ ಪರಭಾಷೆ ಸಿನಿಮಾಗಳಲ್ಲಿ ನಟಿಸುವುದೂ ಇಲ್ಲ. ಸಿನಿಮಾ ನನ್ನ ಉಸಿರು ಎಂದು ವೆಂಕಟ್ ಹೇಳಿಕೊಂಡಿದ್ದಾರೆ.