ಮಂಗಳೂರು: ದ.ಕ. ಜಿ.ಪಂ.ಗೆ ಬರುವ ಅನುದಾನ ಸೇರಿದಂತೆ ಅಧಿಕಾರ ಮೊಟಕುಗೊಳಿಸಲಾಗಿದ್ದು, ಕೇವಲ ಕೆಲವು ವಿಚಾರಗಳಿಗೆ ಮಾತ್ರ ಸೀಮಿತಗೊಳಿಸಿ ನಾಮಕಾವಸ್ತೆ ವ್ಯವಸ್ಥೆಯಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ದ.ಕ. ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹಾಗೂ ಉಪಾಧ್ಯಕ್ಷ ಸತೀಶ್ ಕುಂಪಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಿ.ಪಂ.ನಲ್ಲಿ ಕಳೆದ 5 ವರ್ಷಗಳ ಸಾಧನೆ ಬಗ್ಗೆ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರು, ಆರಂಭದ ಮೂರು ವರ್ಷಗಳಲ್ಲಿ ಜಿ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರದಿಂದ ಸಾಕಷ್ಟು ಅನುದಾನ ದೊರಕಿ ಉತ್ತಮ ಪ್ರಗತಿ ಸಾಧಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಸರಕಾರದಿಂದ ನೀಡಲಾಗುವ ಅನುದಾನದಲ್ಲಿ ಬಹಳಷ್ಟು ಕಡಿತಗೊಂಡಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಕಷ್ಟಸಾಧ್ಯವಾಗಿದೆ ಎಂದರು.
ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಈ ಬಾರಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಲ್ಲಿ ಕೇಂದ್ರ ಸರಕಾರದಿಂದ ಬಂದ ಹಣದಲ್ಲಿ ದ.ಕ. ಜಿ.ಪಂ.ಗೆ ಅತ್ಯಲ್ಪ ಅನುದಾನ ನೀಡಲಾಗಿದ್ದು, ಕೇವಲ ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ತುರ್ತು ಕುಡಿಯುವ ನೀರು ಯೋಜನೆಯಲ್ಲಿ ಅನುದಾನವನ್ನು ಜಿಲ್ಲಾ ಪಂಚಾಯತ್ನಿಂದ ತೆಗೆದು ಶಾಸಕರಿಗೆ ನೀಡಲಾಗಿದೆ. ಇದೇ ರೀತಿ ಗ್ರಾಮವಿಕಾಸ ಯೋಜನೆ, ಸರ್ವಶಿಕ್ಷಣ ಯೋಜನೆ ಸೇರಿದಂತೆ ಜಿ.ಪಂ.ಗೆ ಇದ್ದ ಬಹಳಷ್ಟು ಅಧಿಕಾರ ಮೊಟಕುಗೊಳಿಸಲಾಗಿದೆ ಎಂದರು.