ಮುಂಬಯಿ, ಜ.15: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಸಂಯೋಜಕತ್ವದಲ್ಲಿ ಮಕರ ಸಂಕ್ರಾಂತಿಯ ಪರ್ವಕಾಲವಾದ ದಿನಾಂಕ 14/1/2016 ಗುರುವಾರದಂದು ಗೋಕುಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಂಜೆ ವೇದಿಕೆಯಲ್ಲಿ ಅಲಂಕೃತ ಮಂಟಪದಲ್ಲಿ ಶ್ರೀ ಸತ್ಯನಾರಾಯಣ ದೇವರ ಪ್ರತಿಷ್ಠಾಪನೆಯಾದ ನಂತರ ಮಂದಿರದ ಅರ್ಚಕ ಶ್ರೀ ಹರಿ ಭಟ್ ರವರ ನೇತೃತ್ವದಲ್ಲಿ ರಮೇಶ್ ರಾವ್ ಹಾಗೂ ವನಿತಾ ರಾವ್ ದಂಪತಿ ಯಜಮಾನತ್ವದಲ್ಲಿ, ಪ್ರಾರ್ಥನೆಯೊಂದಿಗೆ ಪೂಜಾವಿಧಿ ಆರಂಭವಾಯಿತು. ವೇದಮೂರ್ತಿ ನಟೇಶ ಅಮ್ಮಣ್ಣಾಯರವರು ಸೇವಾರ್ಥಿಗಳಿಗೆ ಸಾಮೂಹಿಕ ಸಂಕಲ್ಪವನ್ನು ನೆರವೇರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ 'ಹರಿದಾಸ ವಿರಚಿತ ದಶಾವತಾರ ಹಾಡುಗಳ ಭಜನೆ' ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಗೋಕುಲ ಕಲಾವೃಂದ ಭಜನಾ ಮಂಡಳಿ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ಮಧ್ವೇಶ ಭಜನಾ ಮಂಡಳಿ, ಸಾಂತಾಕ್ರೂಜ್, ಶ್ರೀ ವಿಠಲ ಭಜನಾ ಮಂಡಳಿ, ಮೀರಾರೋಡ್, ಮತ್ತು ಆಶ್ರಯ ಕಲಾವೃಂದ ಭಜನಾ ಮಂಡಳಿ, ನವಿಮುಂಬಯಿ ಹೀಗೆ 5 ಭಜನಾ ಮಂಡಳಿಯ ಸುಮಾರು 70 ಮಂದಿ ಭಾಗವಹಿಸಿ ಪುರಂದರದಾಸರು, ಕನಕದಾಸರು, ಸುಬ್ಬಣ್ಣದಾಸರು, ವಾದಿರಾಜರು, ಹೆಳವನಕಟ್ಟೆ ಗಿರಿಯಮ್ಮ, ಗುರು ಶ್ಯಾಮ ಸುಂದರದಾಸರು ಹಾಗೂ ಮಹಿಪತಿ ದಾಸರಿಂದ ವಿರಚಿತವಾದ ದಶಾವತಾರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮೃದಂಗದಲ್ಲಿ ಪದ್ಮರಾಜ್ ಉಪಾಧ್ಯಾಯ ಹಾಗೂ ಹಾರ್ಮೋನಿಯಂನಲ್ಲಿ ಸುದರ್ಶನ್ ರಾಜ್ ಸಹಕರಿಸಿದರು. ಪ್ರೇಮಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಮಹಿಳಾ ವಿಭಾಗದವರು ಉಪಸ್ಥಿತರಿದ್ದ ಮಹಿಳೆಯರಿಗೆ 'ಅರಸಿನ ಕುಂಕುಮ' ಹಾಗೂ ನೆರೆದಿದ್ದ ಸಮಸ್ತ ಭಕ್ತ ವೃಂದಕ್ಕೆ 'ಎಳ್ಳುಂಡೆ' ವಿತರಿಸಿದರು. ಸಂಘದ ಸದಸ್ಯರಾದ ಭಾಂಡುಪ್ ನಿವಾಸಿ ಬಿ.ಮಂಜುನಾಥ್ ಭಟ್ ಪರಿವಾರದವರು ಮಹಿಳೆಯವರಿಗೆ ಅರಸಿನ ಕುಂಕುಮದೊಂದಿಗೆ ರವಿಕೆ ಕಣ, ಬಳೆ, ಪುಷ್ಪಾದಿಗಳನ್ನು ವಿತರಿಸಿದರು. ರಾತ್ರಿ ಎಂಟು ಗಂಟೆಗೆ ಮಹಾ ಮಂಗಳಾರತಿ, ತೀರ್ಥ-ಪ್ರಸಾದ ಹಾಗೂ ಸುಮಾರು 400 ಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.