ಮುಂಬಯಿ, ಜ.17: ಗೌಡ ಸಾರಸ್ವತ್ ಬ್ರಾಹ್ಮಣ ಸಮುದಾಯದ ಜಗದ್ಗುರು ಎಂದೆಣಿಸಿದ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಇಂದಿಲ್ಲಿ ಹರಿದ್ವಾರದಲ್ಲಿ ಮುಕ್ತಿ (ದೈವಕ್ಯ) ಹೊಂದಿದರು. ಶ್ರೀಗಳು ಮುಂಬಯಿ ಅಲ್ಲಿನ ಅಂಧೇರಿ ಪೂರ್ವದಲ್ಲಿನ ಸೆವೆನ್ ಹಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಶನಿವಾರ ಬೆಳಿಗ್ಗೆ ಸ್ವಾಮೀಜಿ ಅವರ ಆಶಯದಂತೆ ಏರ್ಅಂಬ್ಯುಲೆನ್ಸ್ ಮುಖೇನ ಪಟ್ಟದ ದೇವರ ಸನ್ನಿಧಿ ಹರಿದ್ವಾರಕ್ಕೆ ಕರೆ ತರಲಾಗಿತ್ತು.
ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಇದರ ಕಿರಿಯ ಯತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಮತ್ತು ಸತೀಶ್ ರಾಮ ನಾಯಕ್ ಸೇರಿದಂತೆ ಜಿಎಸ್ಬಿ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಗಳ ಮುಕ್ತಿಯು ಬರೇ ಜಿಎಸ್ಬಿ ಸಮಾಜ ಮಾತ್ರವಲ್ಲ ಅಖಂಡ ರಾಷ್ಟ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಶ್ರೀಗಳ ಅಗಲಿಕೆ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಮಾತ್ರವಲ್ಲದೆ ಅವರ ಸ್ಥಾನವನ್ನು ಇನ್ಯಾರೂ ತುಂಬಲಸಾಧ್ಯ ಎಂದು ಜಿಎಸ್ಬಿ ಸೇವಾ ಮಂಡಳ್ ಸಯಾನ್ ಗಣೇಶೋತ್ಸವ ಸಮಿತಿ ಸಂಚಾಲಕ ಸತೀಶ್ ರಾಮ ನಾಯಕ್ ಮಾಟುಂಗಾ ತಿಳಿಸಿದ್ದಾರೆ.
ಜಿಎಸ್ಬಿ ಸೇವಾ ಮಂಡಳ್ ಸಯಾನ್ ಇದರ ಅಧ್ಯಕ್ಷ ರಾಘವೇಂದ್ರ ಜಿ.ಭಟ್, ಉಪಾಧ್ಯಕ್ಷ ರಮಾನಾಥ ಕಿಣಿ, ಗೌ| ಕಾರ್ಯದರ್ಶಿ ರಮೇಶ್ ಭಂಡಾರ್ಕರ್, ಖಜಾಂಜಿ ಸುರೇಶ್ ಭಟ್, ಜತೆ ಕಾರ್ಯದರ್ಶಿ ಪ್ರಶಾಂತ್ ಪುರಾಣಿಕ್, ಜತೆ ಕೋಶಾಧಿಕಾರಿ ಪ್ರಶಾಂತ್ ಮಲ್ಯ, ಗಣೇಶೋತ್ಸವ ಸಮಿತಿ ಸಂಚಾಲಕ ಡಾ| ಭುಜಂಗ ಪೈ, ಜತೆ ಸಂಚಾಲಕ ಜಿ.ಡಿ.ರಾವ್, ಆರ್ಚಕ ಕೃಷ್ಣ ಭಟ್, ಕಾಶೀ ಮಠದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಮೋಹನ್ದಾಸ್ ಮಲ್ಯ, ಕಾರ್ಯದರ್ಶಿ ಮಧುಸೂಧನ ಪೈ, ಜಿ.ಎಸ್.ಬಿ ಸಭಾ ದಹಿಸರ್-ಬೊರಿವಲಿ (ರಿ.) ಇದರ ಅಧ್ಯಕ್ಷ ಕೆ.ಆರ್.ಮಲ್ಯ ಹಾಗೂ ಉಪಾಧ್ಯಕ್ಷೆ ಮೋಹಿನಿ ಎಸ್.ಶ್ಯಾನ್ಭಾಗ್, ಗೌ| ಪ್ರ| ಕಾರ್ಯದರ್ಶಿ ಎಂ.ಯು ಪಡಿಯಾರ್, ಜತೆ ಕಾರ್ಯದರ್ಶಿಗಳಾದ ಸಾಣೂರು ಮನೋಹರ್ ವಿ.ಕಾಮತ್ ಮತ್ತು ಆರ್.ವಿ ಶೆಣೈ,ಇನ್ನಿತರ ಪದಾಧಿಕಾರಿಗಳು, ಸದಸ್ಯರು, ನೂರಾರು ಭಕ್ತರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)