ಕುವೆಂಪು ಎಂದರೆ ಒಂದು ಅಂತರಳ: ಡಾ| ಜಯಂತ ಕಾಯ್ಕಿಣಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.17: ಕನ್ನಡ ಉಳಿಬೇಕೋ, ಬಡತನ ಉಳಿಬೇಕೋ ಎನ್ನುವುದೇ ಜಿಜ್ಞಾಸೆ ಉಳಿದಿದೆ. ಬಡತನ ಉಳಿದರೆ ಕನ್ನಡ ಉಳಿಯಲಿದೆ ಎನ್ನುವುದು ಮತ್ತೊಂದು ವಾದ ಆದುದರಿಂದ ಎಲ್ಲವೂ ಸಮಕಾಲೀನ ಪ್ರೇಶ್ನೆಗಳಾಗಿವೆ. ಕನ್ನಡ ಭಾಷೆ ಬಂದರೆ ಎಲ್ಲ ಭಾಷೆಗಳು ಮಾತನಾಡಲೂ ಬರುವುದು ಎನ್ನುವುದು ನನ್ನ ಅಭಿಮತ. ಎಲ್ಲದ್ದಕ್ಕೂ ಮುಖ್ಯವಾಗಿ ಚಿಂತನೆ ಶೀಲತೆ ಅತ್ಮೀಯತೆ ಇದ್ದರೆ ಮಾತ್ರ ಸಾಹಿತ್ಯವಾಗುವುದು ಎಂದು ನಾಡಿನ ಹೆಸರಾಂತ ಸಾಹಿತಿ ಡಾ| ಜಯಂತ ಕಾಯ್ಕಿಣಿ ತಿಳಿಸಿದರು.
ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಮೈಸೂರು ಅಸೋಸಿಯೇಶನ್ನ ಬಂಗಾರ ಹಬ್ಬದ ದತ್ತಿ ಉಪನ್ಯಾಸ 2015-2016ರಲ್ಲಿ `ಕುವೆಂಪು ; ಕವಿ ನೆನಪಿನ ಸವಿಯಾನ' ವಿಷಯದಲ್ಲಿ ಉಪನ್ಯಾಸ ನೀಡಿ ಡಾ| ಕಾಯ್ಕಿಣಿ ಮಾತನಾಡಿದರು.
ಜೀವನವೆಂಬುದು ಹೂವಿನ ಬೀಡು. ಕವಿಯ ಎದೆ ಆ ಹೂವಿನಿಂದ ಒಂದೊಂದು ಮಕರಂದ ತೆಗೆದುಕೊಂಡು ಜೇನು ತಯಾರಿಸುವುದು ಕುವೆಂಪು ಅವರ ಮಾತುಗಳು ಇಂದಿಗೂ ಸ್ಮರಣೀಯ. ಮಾನವೀಯ ಆಸಕ್ತಿಯಿಂದ ಕುವೆಂಪು ಕವಿಯನ್ನು ನೋಡುವುದೆ?. ಕುವೆಂಪು ಎಂದರೆ ಒಂದು ಅಂತರಳ, ಒಂದು ಮನೋಧರ್ಮ.ಅವರು ಬುದ್ಧಿಭಾವಗಳ ವಿದ್ಯುತ್ ಆಲಿಂಗನ. ಕುವೆಂಪು ಅವರು ಒಬ್ಬ ವ್ಯಕ್ತಿಯಾಗಿ ಅಸಾಧಾರಣ ವ್ಯಕ್ತಿತ್ವವುಳ್ಳವರು ಎಂದು ಡಾ| ಕಾಯ್ಕಿಣಿ ತಿಳಿಸಿದರು.
ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವಿಕ ನುಡಿಗಳನ್ನಾಡಿ ಜಯಂತ್ ಮುಂಬಯಿಗರ ಅಭಿಮಾನ. ಕನ್ನಡತನವನ್ನು ಶ್ರೀಮಂತಗೊಳಿಸಿದ ಬರಹಗಾರ. ಕನ್ನಡ ಸಾಹಿತ್ಯಕ್ಕೆ ಇವರ ಕೊಡಿಗೆ ಅಪೂರ್ವವಾದದ್ದು. ಭಾಷೆಯನ್ನು ಕಲಾತನವಾಗಿ ದುಡಿಸಿಕೊಂಡ ಪ್ರತಿಭಾನ್ವಿತರಾಗಿದ್ದಾರೆ. ವಿಭಾಗವು ದ್ವೀಪವಾಗಿ ಉಳಿಯುವಂತೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ಮೈಸೂರು ಅಸೋಸಿಯೇಶನ್ನ ಅಧ್ಯಕ್ಷೆ ಕೆ.ಕಮಲಾ ಅವರು ಜಯಂತ ಕಾಯ್ಕಿಣಿ ಅವರಿಗೆ ಸ್ಮರಣಸಂಚಿಕೆ, ಕೃತಿ ಗೌರವವನ್ನಿತ್ತು ಅಭಿವಂದಿಸಿದರು. ಡಾ| ಬಿ.ಆರ್.ಮಂಜುನಾಥ ಅವರು ಪ್ರಾರ್ಥನೆಯನ್ನಾಡಿದರು.ಕೆ. ಮಂಜುನಾಥಯ್ಯ ಸ್ವಾಗತಿಸಿದರು. ಡಾ| ಜ್ಯೋತಿ ಸತೀಶ್ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು.