ಮಂಗಳೂರು: ಕರಾವಳಿ ತೀರದಲ್ಲಿ ಭದ್ರತೆ ವ್ಯವಸ್ಥೆ ಹೆಚ್ಚಿಸುವ ನಿಟ್ಟಿನಲ್ಲಿ ಕರಾವಳಿ ಪೊಲೀಸ್ ಪಡೆಯ ಬಲವರ್ಧನೆಗೆ ಕ್ರಮಕೈಗೊಳ್ಳಲಾಗಿದ್ದು, ಮುಂದಿನ ಬಜೆಟ್ನಲ್ಲಿ ಇದಕ್ಕೆ ಪೂರಕ ವ್ಯವಸ್ಥೆ ಹೊಂದುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ರಾಜ್ಯ ಗೃಹಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.ಮಂಗಳೂರಿನ ಸರ್ಕಿಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುಪ್ತಚರ ಇಲಾಖೆ, ಕೋಸ್ಟ್ಗಾರ್ಡ್ ನೀಡುವ ಮಾಹಿತಿ, ಸಲಹೆ ಆಧರಿಸಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಯೋತ್ಪಾದನ ನಿಗ್ರಹ ದಳ ಮಾದರಿಯಲ್ಲೇ ರಾಜ್ಯದಲ್ಲಿ 110 ಯುವ ಪೊಲೀಸ್ ಸಿಬಂದಿಗಳನ್ನು ಒಳಗೊಂಡ ಗರುಡ ದಳ ರಚಿಸಲಾಗಿದೆ. ಇದೇ ಮಾದರಿಯಲ್ಲಿ ಕರಾವಳಿ ವಲಯದಲ್ಲೂ ವಿಶೇಷ ದಳ ರಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರುಭಯೋತ್ಪಾದನೆ, ಐಎಸ್ಐಎಸ್ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಬೆಳಗಾಂ ಮುಂತಾದ ನಗರಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಗುಪ್ತಚರ ಇಲಾಖೆ, ರಾ ಮುಂತಾದ ಸಂಸ್ಥೆಗಳು ನೀಡುವ ಮಾಹಿತಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು.
ಶಾಂತಿ ಕದಡುವವರ ವಿರುದ್ಧ ಕಠಿನ ಕ್ರಮ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಇದನ್ನು ಕಾಯ್ದುಕೊಳ್ಳುವ ಕಾರ್ಯವನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿ ಮಾಡುತ್ತಾ ಇದೆ. ರಾಜ್ಯ ಸರಕಾರ ಕೂಡ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇದೆ. ಶಾಂತಿ ಕದಡುವವರನ್ನು ಪ್ರಚೋದನೆ ನೀಡುವವರನ್ನು ನಿರ್ದಾಕ್ಷಿಣ್ಯ ಹತ್ತಿಕ್ಕಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ಘಟನೆಗಳು ಆದ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ಘಟನೆಗಳು ಸಂಭವಿಸದಂತೆ ತಡೆಗಟ್ಟುವ ನಿಟ್ಟಿನಲ್ಲೂ ಕ್ರಮಗಳು ಆಗಬೇಕು. ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳು ಸಾರ್ವಜನಿಕರ ಸಭೆ ನಡೆಸಬೇಕು. ಇದಲ್ಲದೆ ಹಿಂದುಳಿದವರ, ದಲಿತರ ಪ್ರತ್ಯೇಕ ಸಭೆ ನಡೆಸಿ ಅವರ ಕುಂದುಕೊರತೆ ಆಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹಾಗೂ ಕಾಂಗ್ರೆಸ್ ಮುಖಂಡ ಜಿ.ಎ. ಬಾವಾ ಉಪಸ್ಥಿತರಿದ್ದರು