ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಮೂಲದ ಆರೋಪಿಯನ್ನು ಬಂಧಿಸಿರುವುದಾಗಿ ದ.ಕ. ಜಿಲ್ಲಾ ಎಸ್ಪಿ ಶರಣಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಕುರಿತು ಮಾಹಿತಿ ನೀಡಿದರು. ವೃದ್ಧ ದಂಪತಿಗಳನ್ನು ಕೊಲೆ ಮಾಡಿದವನನ್ನು ಗದಗ ಮೂಲದ ರವಿ ಯಾನೆ ರಾಜು(೨೬) ಎಂದು ಗುರುತಿಸಲಾಗಿದ್ದು,
ಈತ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ. ಜ.೧೦ರಂದು ರಾತ್ರಿಯ ವೇಳೆ ವರ್ಗೀಸ್ ಹಾಗೂ ಏಲಿಯಮ್ ಅವರ ಮನೆಗೆ ಬಂದು ನೀರು ಕೇಳಿ, ತನಗೆ ದಾರಿ ತೋರಿಸುವಂತೆ ಕೇಳಿ ವರ್ಗೀಸ್ ಅವರನ್ನು ಕರೆದುಕೊಂಡು ಹೋಗಿ ದಾರಿ ಮಧ್ಯೆ ಹತ್ಯೆ ನಡೆಸಿದ್ದ. ಬಳಿಕ ಮನೆಗೆ ಬಂದು ಏಲಿಯಾಮ್ ರನ್ನು ಕೊಲೆಗೈದು ಅವರ ಮೈ ಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದು ದೋಚಿದ್ದ ಎಂದು ಅವರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್, ಎ ಎಸ್ಪಿ ರಾಹುಲ್ ಕುಮಾರ್, ಡಿಎಸ್ಪಿ ಎ.ಸಿ.ಗೌರೀಶ್ ಸೇರಿದಂತೆ ಹಲವು ಸಿಬ್ಬಂದಿಗಳು ಶ್ರಮಿಸಿದ್ದು, ಅವರಿಗೆ ಪ್ರಸಂಶನಾ ಪತ್ರವನ್ನು ನೀಡಿ ಎಸ್ಪಿ ಶರಣಪ್ಪ ಅವರು ಅಭಿನಂದಿಸಿದರು.