ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಮಹತ್ವದ ಬಗ್ಗೆ ರಾಜ್ಯಾದ್ಯಂತ ಅರಿವು ಮೂಡಿಸುವ ರಥಯಾತ್ರೆಯು ಆದಿತ್ಯವಾರ ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಶುಭ ಹಾರೈಸಿದರು. ಆಯುಷ್ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ, ಯೋಗ ಹಾಗೂ ಹೋಮಿಯೋಪತಿ ಪದ್ಧತಿಗಳಲ್ಲಿ ಜನರಿಗೆ ಇನ್ನೂ ಹೆಚ್ಚಿನ ಭರವಸೆ ಹಾಗೂ ವಿಶ್ವಾಸ ಮೂಡಿ ಬರಲಿ. ವಿದೇಶಿ ವೈದ್ಯಕೀಯ ಪದ್ಧತಿಗಳ ಮೇಲೆ ಇರುವ ಅಂಧಾಭಿಮಾನ ತೊಲಗಬೇಕು. ಭಾರತೀಯ ವೈದ್ಯಕೀಯ ಪದ್ಧತಿಗಳ ಸದುಪಯೋಗ ಪಡೆಯಬೇಕು ಎಂದು ಅವರು ಸಲಹೆ ನೀಡಿದರು. ಫೆಬ್ರವರಿ ತಿಂಗಳಿನಲ್ಲಿ ನಡೆಯುವ ವಿಶ್ವ ಸಮ್ಮೇಳನದಲ್ಲಿ ವೈದ್ಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಹೆಗ್ಗಡೆಯವರು ಹಾರೈಸಿದರು.
ಆಯುಜ್ರ್ಯೋತಿ ರಥ ಮಂಗಳೂರಿನಿಂದ ಉಜಿರೆಯ ಪ್ರಕೃತಿ ಚಿಕಿತ್ಸೆ ಕಾಲೇಜಿಗೆ ಬಂದಾಗ ಅಲ್ಲಿ ಅದನ್ನು ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಳು ಗೌರವ ಪೂರ್ವಕವಾಗಿ ಸ್ವಾಗತಿಸಿದರು. ಡಾ. ಮದನ್ ನಾಡಿಗ ಆಯುಜ್ರ್ಯೋತಿ ರಥದ ಮಹತ್ವವನ್ನು ವಿವರಿಸಿದರು.
ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪ್ಪಾಡಿತ್ತಾಯ, ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಶೆಟ್ಟಿ, ಕೆ.ವಿ.ಯು.ಪಿ. ಬೋರ್ಡ್ನ ಅಧ್ಯಕ್ಷರಾದ ಡಾ. ಸತ್ಯಮೂರ್ತಿ ಭಟ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್ ಉಪಸ್ಥಿತರಿದ್ದರು.