ಬಂಟ ಸಮಾಜದಲ್ಲಿ ವರದಕ್ಷಿಣೆ ಕಡಿಮೆಯಾಗಿದ್ದರೂ ಅದ್ದೂರಿ ಮದುವೆಗೆ ಕಡಿವಾಣ ಬಿದ್ದಿಲ್ಲ : ಮಂಜುಳಾ ಶೆಟ್ಟಿ
ಮಂಗಳೂರು, ಜ.25: ಬಂಟರು ತಮ್ಮ ಮೂಲ ಸಂಸ್ಕøತಿ ಉಳಿಸುವ ಪ್ರಯತ್ನ ನಡೆಸಬೇಕು. ಇದರಲ್ಲಿ ಪುರುಷರಷ್ಟೇ ಸ್ತ್ರೀಯರ ಪಾತ್ರ ಮಹತ್ವದ್ದಾಗಿದೆ. ಹಿಂದೆ ತುಳುನಾಡಿನಲ್ಲಿ ಇತರ ಜಾತಿಯವರು ಮತಾಂತರಗೊಂಡಿದ್ದರೂ ಬಂಟರು ಮಾತ್ರ ತಮ್ಮ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ ; ಮತಾಂತರಗೊಂಡಿಲ್ಲ. ಬಂಟರು `ಅರಿ-ಬಾರ್' ಸಂಸ್ಕøತಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಸರಕಾರಿ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ (ಮಂಗಳೂರು) ಪ್ರಾಧ್ಯಾಪಕಿ ಮಂಜುಳಾ ಶೆಟ್ಟಿ ಹೇಳಿದರು.
ಗುರುಪುರ ಬಂಟರ ಮಾತೃ ಸಂಘ (ರಿ.) ಇದರ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಬಂಟ ಸಮುದಾಯದಲ್ಲಿ ಹೆಣ್ಣು ಹೊರೆಯಾಗಿಲ್ಲ. ಬಂಟರ ವಿವಾಹಗಳಲ್ಲಿ ವರದಕ್ಷಿಣೆ ಕಡಿಮೆಯಾಗಿದ್ದರೂ ಅದ್ದೂರಿ ಮದುವೆಯೆಂಬುದು ಹೆಣ್ಣು ಹೆತ್ತವರಿಗೆ ಈಗಲೂ ದುಬಾರಿಯಾಯಾಗಿದೆ. ಈ ಬಗ್ಗೆ ಬಂಟ ಸಮಾಜ ಚಿಂತಿಸುವ ಅಗತ್ಯವಿದೆ. ಅಂದರೆ ಹಿಂದೆ ಐದಾರು ಲಕ್ಷ ರೂ ವರದಕ್ಷಿಣೆ ನೀಡುಬೇಕಿದ್ದರೆ ಈಗ ಮಧುವಿನ ಕಡೆಯವರು 10-15 ಲಕ್ಷ ರೂ ಖರ್ಚು ಮಾಡಬೇಕಾಗುತ್ತದೆ ಎಂದವರು ವಿಷಾದ ವ್ಯಕ್ತ ಪಡಿಸಿದರು.
ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ ಶೆಟ್ಟಿ ಬಂಟ ಸಮಾಜದ ಕಾರ್ಯಕ್ರಮಗಳಿಗೆ ತನ್ನಿಂದಾದ ಕೊಡುಗೆ ನೀಡುವೆ ಎಂದರೆ, `ಸಂಘದ ಕಾರ್ಯಕ್ರಮ ನಮ್ಮ ಕಾರ್ಯಕ್ರಮವೆಂದು ಭಾವಿಸಿ ಎಲ್ಲರೂ ಭಾಗವಹಿಸಬೇಕು. ಬಡವರು, ಮದುವೆ ಮತ್ತು ರೋಗ ಪೀಡಿತರಿಗೆ ನೆರವು ನೀಡುವೆ ಎಂದು ಪದವು ಮೇಗಿನಮನೆ ಉಮೇಶ್ ರೈ (ಸಹ-ಸಂಚಾಲಕ, ಕಾರ್ಯಕಾರಿ ಸಮಿತಿ, ಬಂಟರ ಮಾತೃ ಸಂಘ-ಮಂಗಳೂರು) ಹೇಳಿದರು. ಈ ಸಂದರ್ಭದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ತೇರ್ಗಡೆ ಹೊಂದಿದ ಬಂಟ ಸಮಾಜದ ಯುವಕ ನಿತೇಶ್ ಶೆಟ್ಟಿಯನ್ನು ಗೌರವಿಸಲಾಯಿತು.
ಬಂಟರ ಸಂಘದ `ಸದಸ್ಯತ್ವ ಕಾರ್ಡ್' ಬಿಡುಗಡೆಗೊಳಿಸಿದ ಹಿರಿಯ ಸದಸ್ಯ ಲಿಂಗುಮಾರು ಶಿವಣ್ಣ ಶೆಟ್ಟಿ ಮಾತನಾಡುತ್ತ, ಈ ಸಂಘದವರು ಒಂದೆರೆಡು ವರ್ಷದ ಅವಧಿಯಲ್ಲಿ ಅಭೂತಪೂರ್ವ ಕೆಲಸ ಮಾಡಿದ್ದಾರೆ. 10 ಗ್ರಾಮಗಳಲ್ಲಿ ಇವರ ಕೆಲಸ ಮೆಚ್ಚಿಕೊಳ್ಳುವಂತಿದೆ. ಈ ಸಂಘದ ಸಮಾಜ ಕಾರ್ಯ ಹಾಗೂ ಬೆಳವಣಿಗೆಯಲ್ಲಿ ಬಂಟ ಬಂಧುಗಳು ನೆರವಾಗಬೇಕು ಎಂದು ಕರೆ ನೀಡಿದರು. ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಸಂದರ್ಭೋಚಿತ ಮಾತನ್ನಾಡಿದರು.
ವಜ್ರದೇಹಿ ಸ್ವಾಮಿ ಆರ್ಶೀವಚನ :
ಸಂಘಟನೆಯಿಂದ ಸಮಾಜ ಸದೃಢವಾಗುತ್ತದೆ. ಈ ಸಂಘದ ಪ್ರಗತಿಯಲ್ಲಿ ಎಲ್ಲರ ಜವಾಬ್ದಾರಿ ಇದೆ. ಬಂಟರ ಸಂಘ ಇತರ ಸಮಾಜಕ್ಕೆ ಮಾದರಿಯಾಗಬೇಕು ಎಂದು ಗುರಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಅಭಿಪ್ರಾಯಪಟ್ಟರು.
ಸಂಘದ ಯೋಜನೆ :
ಸಮಾಜದ ದುರ್ಬಲ ಕುಟುಂಬಗಳ ಹೆಣ್ಮಕ್ಕಳ ಮದುವೆಗೆ ಉಚಿತ ವಾಹನ ಸೇವೆ, ಟೈಲರಿಂಗ್ ಯಂತ್ರ ಹಂಚಿಕೆ, ವಸತಿರಹಿತರಿಗೆ ದಾನಿಗಳ ಸಹಕಾರ ಪಡೆದು ಮನೆ ಕಟ್ಟಿ ಕೊಡುವುದು, ಮದುವೆ, ಅನಾರೋಗ್ಯ, ಭಿನ್ನಚೇತನ, ಪ್ರತಿಭಾನ್ವಿತರ ಗುರುತಿಸಿ ನೆರವು, ಗೌರವಿಸುವುದು. ಸಾಂಸ್ಕøತಿಕ ಮತ್ತು ಇನ್ನಿರತ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಾಗೂ ಡಿ.24 ಮತ್ತು 25ರಂದು ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮೈದಾನದಲ್ಲಿ ಅಭೂತಪೂರ್ವ ಬಂಟರ ಸಮಾವೇಶ ಆಯೋಜಿಸಲು ಸಂಘ ನಿರ್ಣಯಿಸಿದೆ ಎಂದು ಕಾರ್ಯಕಾರಿ ಸಮಿತಿ ಸಂಚಾಲಕ ಸುದರ್ಶನ ಶೆಟ್ಟಿ ಪೆರ್ಮಂಕಿ ವಿವರಿಸಿದರು.
ಸಂಘದ ನೂತನ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ಸ್ವಾಗತಿಸಿದರೆ, ನರೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ವೇದಿಕೆಯಲ್ಲಿ ಪದನಿಮಿತ್ತ ಅಧ್ಯಕ್ಷ ಉಮೇಶ್ ಮುಂಡ, ಜಯಲಕ್ಷ್ಮೀ ಶೆಟ್ಟಿ, ಜಗದೀಶ ಶೆಟ್ಟಿ, ನಳಿನಿ ಶೆಟ್ಟಿ ಉಪಸ್ಥಿತರಿದ್ದು, ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕೋಶಾಧಿಕಾರಿ ಸತ್ಯಾನಂದ ಶೆಟ್ಟಿ ವರದಿ ವಾಚಿಸಿದರು. ಸಭಾ ಕಾರ್ಯಕ್ರನಮದ ಬಳಿಕ ಬಂಟರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಕಾಪು ಪ್ರಶಂಸ ಕಲಾತಂಡದಿಂದ `ಬಲೆ ತೆಲಿಪುಗ' ಹಾಸ್ಯ ಕಾರ್ಯಕ್ರಮ ಜರುಗಿತು.