41ನೇ ವಾರ್ಷಿಕ ಶ್ರೀ ಶನಿಗ್ರಂಥ ಪಾರಾಯಣ ಕಾರ್ಯಕ್ರಮ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.26: ಬೊರಿವಲಿ ಪೂರ್ವದ ಸಾವರ್ಪಾಡ ಅಲ್ಲಿನ ಶ್ರೀ ಶನಿ ಮಹಾತ್ಮ ಪೂಜಾ ಮಿತ್ರ ಮಂಡಳಿ ಸಂಚಾಲಕತ್ವದ ಶ್ರೀ ಶನಿ ಮಂದಿರದಲ್ಲಿ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1937ನೇ ಮನ್ಮಥ ನಾಮ ಸಂವತ್ಸರದ ಮಕರ ಮಾಸವಾದ ಇಂದಿಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತ್ರಯೋದಶ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ 41ನೇ ವಾರ್ಷಿಕ ಶ್ರೀ ಶನಿಗ್ರಂಥ ಪಾರಾಯಣ ಕಾರ್ಯಕ್ರಮವು ವಿಜೃಂಭನೆಯಿಂದ ನೆರವೇರಿಸಲ್ಪಟ್ಟಿತು.
ಮಂದಿರದ ಪ್ರಧಾನ ಅರ್ಚಕ ಪೆರ್ಡೂರು ಶ್ರೀ ವಿಷ್ಣುಮೂರ್ತಿ ಅಡಿಗರು ತನ್ನ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಜರಗಿಸಿದ್ದು, ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಗಣಪತಿ ಹೋಮ, ಶನೈಶ್ವರ ದೇವರ ಸನ್ನಿಧಿಯಲ್ಲಿ ನವಕ ಕಲಶ, ಪ್ರಧಾನ ಹೋಮ, ಪರಿವಾರ ದೇವರಿಗೆ ಕಲಶ ಹೋಮ, ನಾಗ ದೇವರಿಗೆ ಆಶ್ಲೇಷಾ ಬಲಿ, ನವಗೃಹ ಶನಿಶಾಂತಿ, ರಂಗಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ ಶನಿ ದೇವರ ಕಲಶ ಪ್ರತಿಷ್ಠಾಪನೆ, ಸಾರ್ವಜನಿಕ ಅನ್ನಸಂತರ್ಪಣೆ, ಶನಿಗ್ರಂಥ ಪಾರಾಯಣ, ಭಜನೆ, ಉಪಕಾರ ಸ್ಮರಣೆ, ರಂಗಪೂಜೆ, ರಾತ್ರಿ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಸಲ್ಪಟ್ಟಿತು. ವಿದ್ವಾನ್ ವೇ| ಮೂ| ರಾಜೇಶ್ ಸಾಮಗ ಮರೋಲ್, ವೇ| ಮೂ| ಶ್ರೀಧರ್ ಭಟ್ ಜೂಯಿನಗರ್, ವೇ| ಮೂ| ಸುಬ್ರಹ್ಮಣ್ಯ ಐತಾಳ ಚೆಂಬೂರು, ವೇ| ಮೂ| ಶ್ರೀನಿವಾಸ ಉಡುಪ ಐರೋಳಿ, ವೇ| ಮೂ| ರವಿಶಂಕರ್ ಐತಾಳ ಹಾಗೂ ಪುರೋಹಿತರು ವಿವಿಧ ಪೂಜಾಧಿಗಳನ್ನು ನೆರವೇರಿಸಿ ಹರಸಿದರು.
ಇದೇ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮ ಪೂಜಾ ಮಿತ್ರ ಮಂಡಳಿ ಅಧ್ಯಕ್ಷ ಗೋವರ್ಧನ ಎ.ಸುವರ್ಣ, ಉಪಾಧ್ಯಕ್ಷ ಸಂಜೀವ ಕೆ.ಸಾಲ್ಯಾನ್, ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ವಿ.ಶೆಟ್ಟಿ ಅವರು ಪದಾಧಿಕಾರಿಗಳನ್ನೊ ಳಗೊಂಡು ಮಹಾದಾನಿ ಕುಮಾರ್ ಖಾರ್ವಿ ಮತ್ತು ಮಾಲಿನಿ ಕುಮಾರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗೌ| ಪ್ರ| ಕೋಶಾಧಿಕಾರಿ ಕೇಶವ ಹೆಚ್.ಕಾಂಚನ್, ಜೊತೆ ಕಾರ್ಯದರ್ಶಿ ನಾಗೇಶ್ ಕೆ.ಕರ್ಕೇರ, ಜೊತೆ ಕೋಶಾಧಿಕಾರಿ ಗಿರೀಶ್ ಜಿ.ಕರ್ಕೇರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ತಿಮ್ಮಪ್ಪ ಎಂ.ಕೋಟ್ಯಾ, ರಘುನಾಥ್ ಎಸ್.ಸಾಲ್ಯಾನ್, ಮೋನಪ್ಪ ಎಂ.ತಿಂಗಳಾಯ, ವಿಮಲಾ ಡಿ.ಕೋಟ್ಯಾನ್, ದೇವದಾಸ್ ವಿ.ಪುತ್ರನ್, ಮೋಹನ್ ಪೂಜಾರಿ, ಸುಧಾಕರ್ ಕೆ.ಸನೀಲ್, ಕೃಷ್ಣ ಅಮೀನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಭುವಾಜಿ ದಯಾನಂದ ಆರ್.ಕುಂದರ್ ಶನಿಗ್ರಂಥ ಪಾರಾಯಣ ವಾಚಿಸಿದ್ದು, ಗಿರಿಧರ್ ಸಿ.ಸುವರ್ಣ ಗ್ರಂಥಅರ್ಥ ವಿವರಿಸಿದರು. ಮಹಾನಗರದಲ್ಲಿನ ಸಾವಿರಾರು ಭಕ್ತರು ಸಕಲ ಪುಣ್ಯ ಫಲಪ್ರದ ಉತ್ಸವದಲ್ಲಿ ಪಾಲ್ಗೊಂಡು ಶನಿ ಮಂದಿರದ ಸಾನಿಧ್ಯ ದೇವರುಗಳ ಶ್ರೀಗಂಧ ತೀರ್ಥ ಪ್ರಸಾದ ಸ್ವೀಕರಿಸಿ ಮಹಾಮಹಿಮಾಪೂರ್ಣ ಮಹದನುಗ್ರಹಕ್ಕೆ ಪಾತ್ರರಾದರು.