ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರಿಗೆ ಗಣರಾಜ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ಭಾಜನರಾಗಿದ್ದಾರೆ. 1998ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಎಂ. ಚಂದ್ರಶೇಖರ್ ಅವರ ಹುಟ್ಟೂರು ಆಂಧ್ರಪ್ರದೇಶದ ನೆಲ್ಲೂರು.
ಏರೋಸ್ಪೆಸ್ ತಂತ್ರಜ್ಞಾನದಲ್ಲಿ ಖರಗಪುರ ಐಐಟಿಯಿಂದ ಬಿಟೆಕ್ ಪದವಿಯನ್ನು ಪಡೆದಿರುವ ಅವರು ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ಎಎಸ್ಪಿ, ಬಿಲಾಸಪುರ ಹಾಗೂ ಮಂಡಿ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ಕರ್ನಾಟಕಕ್ಕೆ ಡೆಪ್ಯುಟೇಶನ್ ಮೂಲಕ ನಿಯುಕ್ತಿಗೊಂಡಿದ್ದರು.ಕರ್ನಾಟಕದಲ್ಲಿ 2009-12ರ ವರೆಗೆ ಬೆಂಗಳೂರು ಪೂರ್ವ ಡಿಎಸ್ಪಿ, 2012-14ರ ವರೆಗೆ ಅಗ್ನಿಶಾಮಕ ಹಾಗೂ ತುರ್ತುಸೇವೆ ಇಲಾಖೆಯಲ್ಲಿ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿ 2014ರಲ್ಲಿ ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತರಾಗಿ ನಿಯುಕ್ತಿಗೊಂಡಿದ್ದರು. ಪೊಲೀಸ್ ಇಲಾಖೆಗೆ ಸೇರುವ ಮೊದಲು ಇನ್ಫೋಸಿಸ್ನಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿದ್ದರು.