ಮಂಗಳೂರು: ರಾಜ್ಯದಲ್ಲಿ ಹಾಗೂ ಮಂಗಳೂರಿನಲ್ಲಿ ಉಗ್ರರ ಚಟುವಟಿಕೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಪ್ರಮುಖ ಸ್ಥಳಗಳೂ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.ಮಂಗಳೂರಿನ ಪ್ರಮುಖ ಕೇಂದ್ರಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದೆಡೆ ಹೆಚ್ಚಿನ ನಿಗಾ ವಹಿಸಲಾಗಿದ್ದು ತಪಾಸಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ದ.ಕ.ಜಿಲ್ಲೆಯ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದ್ದು ಬಂದೋಬಸ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಎಸ್. ಶರಣಪ್ಪ ತಿಳಿಸಿದ್ದಾರೆ.ಬೆಂಗಳೂರು, ಮಂಗಳೂರು ಹಾಗೂ ಹೈದರಾಬಾದ್ನಲ್ಲಿ ಬಂಧಿಸಿರುವ ಶಂಕಿತ ಉಗ್ರರಿಂದ ಮಾಹಿತಿಗಳನ್ನು, ದಾಖಲೆಗಳನ್ನು ಕಲೆ ಹಾಕಿದ್ದು ಈ ಜಾಲದಲ್ಲಿ ಒಳಗೊಂಡಿರುವವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ. ಬಂಧಿತರು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸುವ ಮತ್ತು ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡುವ ಯೋಜನೆಯಲ್ಲಿ ನಿರತರಾಗಿದ್ದರು ಎಂದು ತನಿಖಾ ತಂಡ ಹೇಳಿವೆ.
60 ಉಗ್ರರು ಸಕ್ರಿಯ
ಮಂಗಳೂರಿನ ಬಜಪೆ ಸಮೀಪ ಪೆರ್ಮುದೆಯ ನಜ್ಮುಲ್ ಹುದಾ ಸಹಿತ ಕರ್ನಾಟಕದಲ್ಲಿ 4 ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಶನಿವಾರ ಬೆಂಗಳೂರಿನಲ್ಲಿ ತೆಲಂಗಾಣ ರಾಜ್ಯದ ಹೈದರಾಬಾದ್ನ ಪೊಲೀಸರು ಕಾರ್ಯಾಚರಣೆ ನಡೆಸಿ ಮತ್ತೋರ್ವ ಶಂಕಿತನನ್ನು ಸೆರೆ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲೂ ಪೊಲೀಸ್ ವ್ಯವಸ್ಥೆ ಜಾಗೃತಗೊಂಡಿದೆ. 2004ರಿಂದ ಐಸಿಸ್ ಭಾರತದಲ್ಲಿ ಉಗ್ರರ ನೇಮಕ ನಡೆಸಿದ್ದು ಸುಮಾರು 60 ಉಗ್ರರು ದೇಶದಲ್ಲಿ ಸಕ್ರಿಯರಾಗಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದ್ದು ಶಂಕಿತ ಉಗ್ರರ ಚಲನವಲನಗಳ ಬಗ್ಗೆ ನಿಗಾ ವಹಿಸಿದೆ.