ಬಂಟ್ವಾಳ: ಉತ್ತಮ ಛಾಯಾಚಿತ್ರಗಳಿಂದಲೇ ಪತ್ರಿಕೆಯ ಗುಡ್ವಿಲ್ ಬೆಳೆಯುವುದು. ಪತ್ರಕರ್ತನಂತೆ ಛಾಯಾಗ್ರಾಹಕನೂ ಕೂಡ ಸಮಾಜದ ಕಣ್ಣು ಎಂದು ಉದಯವಾಣಿ ದೈನಿಕದ ಮಂಗಳೂರು ಆವೃತ್ತಿಯ ಮುಖ್ಯಸ್ಥ ಮನೋಹರ್ ಪ್ರಸಾದ್ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ "ರಜತನಡೆಯಲ್ಲೊಂದು ಛಾಯಾಕಿರಣ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಕಿನ ದಾಖಲೀಕರಣವೇ ಪೋಟೋಗ್ರಾಫಿ, ಸೂರ್ಯನ ಬೆಳಿಕಿನಲ್ಲಿ ತೆಗೆಯುವ ಛಾಯಾಚಿತ್ರಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ. ಇಂತಹ ಚಿತ್ರಗಳನ್ನು ಸೆರೆ ಹಿಡಿಯುವ ಚಾಕಚಕ್ಯತೆ ಛಾಯಗ್ರಾಹಕನಲ್ಲಿ ಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಛಾಯಚಿತ್ರಗ್ರಾಹಕನಿಗೆ ವೃತ್ತಿಪರತೆ ಇರಬೇಕು. ಪಸ್ತುತ ದಿನಗಳಲ್ಲಿ ಪೊಟೋಗ್ರಾಫರ್ ಆರ್ಟಿಸ್ಟ್ ಆಗಿರುವುದರ ಜೊತೆಗೆ ನಿರಂತರ ಪ್ರಯೋಗಶೀಲನಾಗಿರುವ ಸೈಂಟಿಸ್ಟ್ ಕೂಡ ಆಗಿರಬೇಕು ಎಂದರು. ಕಿಶೋರ್ ಪೆರಾಜೆಯವರ ಛಾಯಚಿತ್ರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು ಮನಸ್ಸಿಗೆ ಮುದ ನೀಡುವ ಚಿತ್ರಗಳು ಇಲ್ಲಿದ್ದು ಇದು ಕೇವಲ ಬಂಟ್ವಾಳಕ್ಕೆ ಮಾತ್ರ ಸೀಮಿತಗೊಳ್ಳದೆ ಜಿಲ್ಲಾ ಕೇಂದ್ರದಲ್ಲೂ ಪ್ರದರ್ಶನಗೊಳ್ಳಬೇಕು ಎಂದು ಆಶಿಸಿದರು.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾವಿರ ಶಬ್ದಗಳು ಹೇಳುವ ಸುದ್ದಿಯನ್ನು ಒಂದು ಛಾಯಾಚಿತ್ರ ಹೇಳುತ್ತದೆ. ಇಲ್ಲಿರುವ ಮನುಷ್ಯನ ಬೇರೆ ಬೇರೆ ಆಯಾಮಗಳ ಚಿತ್ರಗಳು ನಿಜಕ್ಕೂ ಅದ್ಭುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲ ಅವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಪೊಟೋಗ್ರಾಫಿ ಎನ್ನುವುದು ಮಾತು ಇಲ್ಲದ ಭಾಷೆ, ಬೆಳಕಿನ ಭಾಷೆ ಎಂದು ವ್ಯಾಖ್ಯಾನಿಸಿದರು. ಕಿಶೋರ್ ಪೆರಾಜೆಯವರ ಛಾಯಾಚಿತ್ರಗಳಲ್ಲಿ ಉತ್ತಮ ವಿಷಯ ಇದ್ದು, ಪ್ರಯತ್ನ ಅಭಿನಂದನೀಯ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ , ಛಾಯಾಗ್ರಾಹಕ ಕಿಶೋರ್ ಪೆರಾಜೆ ಉಪಸ್ಥಿತರಿದ್ದರು. ಕಲಾವಿದ ಮಂಜುವಿಟ್ಲ ಅವರು, ಕಿಶೋರ್ ಪೆರಾಜೆ ಅವರ ಫೊಟೋಗಳ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಪತ್ರಕರ್ತರ ಸಂಘದ ರಜತ ವರ್ಷಾಚರಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಡ್ಕಸ್ಥಳ ಸ್ವಾಗತಿಸಿದರು, ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಪ್ರಸ್ತಾವಿಸಿದರು, ರಜತವರ್ಷಾಚರಣೆ ಸಮಿತಿ ಪ್ರಧಾನಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಅಭಿನಂದನಾ ಪತ್ರ ವಾಚಿಸಿದರು. ಸಂಚಾಲಕ ವೆಂಕಟೇಶ್ ಬಂಟ್ವಾಳ ವಂದಿಸಿದರು, ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.