ಮಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಆಶಾದಾಯಕವಾಗಿಯೇ ಇದೆ. ಆದರೆ, ಪಕ್ಷ ಅಧಿಕಾರದ ಮದ ಪ್ರದರ್ಶಿಸಿದರೆ ಮುಂಬರುವ ಚುನಾವಣೆಯಲ್ಲಿ ಖಂಡಿತಾ ಕಷ್ಟ ಎದುರಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ.ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಗಮನ ಕೊಡಬೇಕು ಹಾಗೂ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಅತಿಯಾದ ಆತ್ಮ ವಿಶ್ವಾಸ ಸಲ್ಲದು. ಇದು ಈ ಚುನಾವಣೆ ನಮಗೆ ಕಲಿಸಿದ ಪಾಠ ಎಂದರು.
ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಗಮ, ಮಂಡಳಿಗಳಿಗೆ ಕೂಡಲೇ ನೇಮಕ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಎರಡು ದಿನಗಳಲ್ಲಿ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಬಹುದು ಎಂದರು.
ದ.ಕ. ಜಿ.ಪಂ. ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದರೂ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ತಾ.ಪಂ. ಚುನಾವಣೆಯಲ್ಲಿ ಸಾಧನೆ ಉತ್ತಮವಾಗಿದ್ದರೂ ಕುಣಿದು ಕುಪ್ಪಳಿಸುವಂತಹ ಪರಿಸ್ಥಿತಿ ಇಲ್ಲ ಎಂದ ಅವರು, ಜಿಲ್ಲೆಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಇದುವರೆಗೆ ಅವರೆಲ್ಲರೂ ಒಂದು ಕಡೆ ಕುಳಿತು ಚರ್ಚಿಸಿರುವುದು ಕಂಡುಬಂದಿಲ್ಲ. ಅವರಲ್ಲಿ ಸಮನ್ವಯದ ಕೊರತೆ ಇದೆಯೇ ಎಂದು ಭಾಸವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಶಾಸಕರ ಜತೆ ಸಮಾಲೋಚನೆ ನಡೆಸಿ ಸಮಗ್ರ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.