ಮಂಗಳೂರು: ಬಂಟ್ವಾಳದ ತುಂಬೆಯಲ್ಲಿ 7 ಮೀಟರ್ ಎತ್ತರದ ನೂತನ ವೆಂಟೆಡ್ ಡ್ಯಾಂ ನಿರ್ಮಾಣಗೊಂಡರೂ 4 ಮೀಟರ್ ಮಾತ್ರ ನೀರು ಸಂಗ್ರಹಣೆಯಿರುತ್ತದೆ. ಈ ಬಗ್ಗೆ ನದೀ ತೀರದ ಜನರು ಆತಂಕ ಪಡುವ ಅಗತ್ಯವಿಲ್ಲ. ಸಂತ್ರಸ್ತ ಕೃಷಿಕರಿಗೆ ಪರಿಹಾರ ನೀಡಿದ ಬಳಿಕವೇ ಡ್ಯಾಂನಲ್ಲಿ ನೀರು ಸಂಗ್ರಹಣೆ ಪ್ರಾರಂಭಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.ತುಂಬೆ ವೆಂಟೆಡ್ ಡ್ಯಾಂನಲ್ಲಿ ಗಂಗಾ ಪೂಜೆ ನೆರೆವೇರಿಸಿ ನೇತ್ರಾವತಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಂಬೆ ವೆಂಟೆಡ್ ಡ್ಯಾಂ ಕಳ್ಳಿಗೆ ಗ್ರಾಮದಲ್ಲಿಯೇ ಇದ್ದರೂ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸಾಮಾಜಿನ ನ್ಯಾಯದಡಿ ಈ ಭಾಗದ ಜನರಿಗೂ ನೀರು ಪೂರೈಸುವ ಬಗ್ಗೆ ಚಿಂತನೆಯಿದ್ದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು. ಮರವೂರು ಡ್ಯಾಂ ನಿರ್ಮಾಣಕ್ಕೆ ಎಡಿಬಿ ಯಡಿ 80 ಕೋಟಿ ರುಪಾಯಿ ಹಣ ಒದಗಿಸಲಾಗಿದೆ ಎಂದರು.
ಈ ಸಂದರ್ಭ ಮನಪಾ ಮೇಯರ್ ಜೆಸಿಂತಾ ವಿಲ್ಫ್ರೆಡ್,ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮನಪಾದ ಸಚೇತಕ ಶಶಿಧರ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ ಪ್ರಮುಖರಾದ ಪ್ರಕಾಶ್ ಸಾಲ್ಯಾನ್, ಹರಿನಾಥ್, ಕೇಶವ ಮರೋಳಿ ಮೊದಲಾದವರು ಉಪಸ್ಥಿತರಿದ್ದರು..