ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಈ ಬಾರಿಯ ಬಿ.ಎ., ಬಿ.ಕಾಂ., ಬಿಬಿಎಂ ಹಾಗೂ ಬಿಎಸ್ಸಿ ಕೋರ್ಸ್ ಪರೀಕ್ಷೆಗಳ ಉತ್ತರ ಪತ್ರಿಕೆಗಳಲ್ಲಿ ಕಂಡುಬಂದಿರುವ ಗೊಂದಲಗಳನ್ನು ಒಂದು ವಾರದೊಳಗೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ| ಎ.ಎಂ. ಖಾನ್ ತಿಳಿಸಿದ್ದಾರೆ.
ಮೌಲ್ಯಮಾಪನ ಗೊಂದಲ ಕುರಿತು ಮಂಗಳೂರು ವಿ.ವಿ. ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಪ್ರಸ್ತುತ ಅಂತರ್ಜಾಲದಲ್ಲಿ ಪ್ರಕಟಿಸಿರುವ ಫಲಿತಾಂಶ ಹಾಗೂ ಅಂಕಪಟ್ಟಿ ತಾತ್ಕಾಲಿಕವಾಗಿದ್ದು, (ಪ್ರೊವಿಷನಲ್) ವಿವರವಾದ ಅಂಕಪಟ್ಟಿ ಕಾಲೇಜುಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಲೋಪಗಳ ಬಗ್ಗೆ ಬಂದಿರುವ ದೂರು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಅಂಗೀಕಾರಗೊಳ್ಳದ ಪ್ರವೇಶಾತಿ, ಕೋಡ್ನಂಬರ್ ತಪ್ಪಾಗಿ ನಮೂದು ಆಗಿರುವುದು, ಅಂತರಿಕ ಮೌಲ್ಯಮಾಪನದ ಅಂಕಗಳನ್ನು ಹಾಗೂ ಆರ್ಥಿಕ ವರದಿಗಳನ್ನು ಕಾಲೇಜುಗಳು ನೀಡದಿರುವುದು ಮುಂತಾದ ತಾಂತ್ರಿಕ ಕಾರಣಗಳಿಂದ ಕೆಲವು ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಸಂಬಂಧಿತ ಕಾಲೇಜುಗಳ ವಿವರಣೆ ಬಂದ ತತ್ಕ್ಷಣ ಇವುಗಳನ್ನು ಪ್ರಕಟಿಸಲಾಗುತ್ತದೆ. ಅಂಗೀಕಾರಗೊಳ್ಳದ ಸುಮಾರು 2,000 ಪ್ರವೇಶಗಳಲ್ಲಿ 800 ವಿದ್ಯಾರ್ಥಿಗಳ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದರು.