ಉಡುಪಿ, ಮಾರ್ಚ್ 8: ಕಾಪು ಪುರಸಭಾ ವ್ಯಾಪ್ತಿಯಲ್ಲಿ ರೂ.120 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಪು ಪುರಸಭೆಯನ್ನು ರಾಜ್ಯದಲ್ಲೇ ಮಾದರಿ ಪುರಸಭೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಇಂದು ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಫಲನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಪು ಪುರಸಭಾ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ಶುಧ್ಧ ಕುಡಿಯುವ ನೀರು ಒದಗಿಸಲು 64 ಕೋಟಿ ರೂ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ, ಕಾಪು ಹಾಗೂ ಕಾಪು ವ್ಯಾಪ್ತಿಯ 4 ಗ್ರಾಮಗಳಲ್ಲಿ 34 ಕೋಟಿ ರೂ ವೆಚ್ಚದ ಒಳಚರಂಡಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಈ ಸಾಲಿನ ಬಜೆಟ್ ನಲ್ಲಿ ಸಹ ಸೇರಿಸಲಾಗಿದೆ,ಕಸ ವಿಲೇವಾರಿಗಾಗಿ ಎಲ್ಲೂರಿನಲ್ಲಿ 10 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ರೂ.8.5 ಕೋಟಿ ರೂ ವೆಚ್ಚದಲ್ಲಿ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕ ಪ್ರಾರಂಭಿಸಲಾಗುವುದು ಇದಕ್ಕಾಗಿ ಈಗಾಗಲೇ 5 ಕೋಟಿ ರೂ ಬಿಡುಗಡೆಯಾಗಿದೆ ಅಲ್ಲದೇ ಈ ವ್ಯಾಪ್ತಿಯ 6 ಸ್ಮಶಾನಗಳ ಅಭಿವೃದ್ದಿಗಾಗಿ 5 ಕೋಟಿ ರೂ ಮಂಜೂರಾತಿ ದೊರೆತಿದೆ, 5 ಕೆರೆಗಳ ಅಭಿವೃದ್ಧಿ ಮತ್ತು ಕರೆಯ ಸುತ್ತ ಪಾರ್ಕ್ ನಿರ್ಮಾಣಕ್ಕೆ 5 ಕೋಟಿ ರೂ ಬಿಡುಗಡೆಯಾಗಿದೆ ಎಂದು ಸಚಿವರು ಹೇಳಿದರು.
94 ಸಿಸಿ ಯೋಜನೆಯಲ್ಲಿ ಹಕ್ಕುಪತ್ರ ವಿತರಿಸಲು ಹಾಗೂ ಇಂದು ಉದ್ಘಾಟನೆಯಾದ ಎಲ್ಲಾ ರಸ್ತೆಗಳನ್ನು ಎಸ್.ಎಫ್.ಸಿ ಯೋಜನೆಯಲ್ಲಿ ಇನ್ನೂ ಮುಂದಕ್ಕೂ ಸಹ ಅಭಿವೃದ್ದಿಪಡಿಸಲು, ದಾರಿದೀಪ ವ್ಯವಸ್ಥೆ ಹಾಗೂ ವಿದ್ಯುತ್ ಕಂಬ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಗದಿಸಲಾಗುವುದು ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ 8 ಮಂದಿ ಫಲಾನುಭವಿಗಳಿಗೆ 12 ಲಕ್ಷ ಮೊತ್ತದ ಸವಲತ್ತುಗಳನ್ನು, ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಾಗೂ ಸ್ತ್ರೀಶಕ್ತಿ ಗಂಪುಗಳಿಗೆ ಸುತ್ತುನಿಧಿಯನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ. ದೇವಿ ಪ್ರಸಾದ ಶೆಟ್ಟಿ, ದಿವಾಕರ ಶೆಟ್ಟಿ. ಸರಸು ಬಂಗೇರಾ, ಸುಧಾಮ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ವಿನಯ ಬಲ್ಲಾಳ್, ಸುಬ್ರಹ್ಮಣ್ಯ ಶೆಟ್ಟಿ, ಸತೀಶ್ ಶೆಟ್ಟಿ, ಮೋಹಿನಿ ಶೆಟ್ಟಿ , ಗುಲ್ಷನ್ ಬೇಗಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿ.ಪ್ರಸನ್ನ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣ ಹೆಬ್ಸೂರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಸ್ವಾಗತಿಸಿದರು. ಉಪ ತಹಸೀಲ್ದಾರ್ ಶೌಕತುಲ್ಲಾ ಅಸಾದಿ ವಂದಿಸಿದರು.