ಮುಂಬಯಿ, ಮಾ.09: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ.ಎಸ್.ಕೆ.ಬಿ ಅಸೋಸಿಯೇಶನ್, ಸಾಯನ್ ಮುಂಬಯಿ ಇವುಗಳ ಸಹಭಾಗಿತ್ವದಲ್ಲಿ ಗೋಕುಲ ಶ್ರೀ ಕೃಷ್ಣ ಮಂದಿರದ ಪ್ರತಿಷ್ಠಾಪನಾ ದಿನಾಚರಣೆಯನ್ನು ಇದೇ ಮಾ.12ನೇ ಶನಿವಾರ ಜರಗಿಸಲಾಗುವುದು.
ಆ ಪ್ರಯುಕ್ತ ಅಂದು ಬೆಳಿಗ್ಗೆ ನಿತ್ಯ ಪೂಜೆಯ ನಂತರ, ಗಣಹೋಮ, ನವಕಲಶ ಪ್ರತಿಷ್ಠೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ವಿಷ್ಣು ಸಹಸ್ರನಾಮ ಪಠನೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ವಿಧಿಗಳು ನೆರವೇರಲಿವೆ. ಪ್ರಸಾದ ಭೋಜನದ ನಂತರ ಎ.ವಿ ಗಣಪತಿ ಹಾಗೂ ಬಳಗವು ಭಕ್ತಿ ಗೀತೆಗಳು ಹಾಗೂ ವಿದುಷಿ ಸಹನಾ ಭಾರದ್ವಾಜ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಗೋಕುಲ ಭಜನಾ ಮಂಡಳಿಯವರು ಆಯೋಜಿಸಿರುವ ದಾಸರ ಪದಗಳ ಆಧಾರಿತ `ಅಂತ್ಯಾಕ್ಷರಿ ನೃತ್ಯ ಭಜನೆ' ನಡೆಯಲಿದೆ. ರಾತ್ರಿ ನಿತ್ಯಪೂಜೆ ನಂತರ ರಂಗಪೂಜೆ ಮತ್ತು ಪಲ್ಲಕ್ಕಿ ಉತ್ಸವ ನೆರವೇರಲಿವೆ.