ಆಧುನಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ ರೀತಿ ಪರಿಣಾಮಕಾರಿಯಾಗಿದೆ : ಡಾ|| ಭರತ್ ಕುಮಾರ್ ಪೊಲಿಪು
ಮುಂಬಯಿ: ವಿಶ್ವಮಹಿಳಾ ದಿನಾಚರಣೆಯ ದಿನದಂದು ಕರ್ನಾಟಕ ಸಂಘದ ಆಯೋಜನೆಯಲ್ಲಿ ‘ಮೈಥಿಲಿ ನಾಟಕವು ಪ್ರದರ್ಶನಗೊಂಡಿರುವುದು ನಿಜವಾಗಿಯೂ ಅರ್ಥಪೂರ್ಣವಾಗಿದೆ. ರಾಮಾಯಣದ ಸೀತೆಯ ಬದುಕಿನ ಕಥಾ ಹಂದರದೊಂದಿಗೆ ಆಕೆಯ ತಾಕಳಾಟವನ್ನು ಅಭಿವ್ಯಕ್ತ ಪಡಿಸುವ ಈ ನಾಟಕ ಸೀತೆಯ ಹುಟ್ಟು, ಸ್ವಯಂವರ ವನವಾಸ, ಅಪಹರಣ, ಪರಿತ್ಯಾಗ ಇವೆಲ್ಲವನ್ನು ವಿಮರ್ಶಿಸಿದಾಗ ಸೀತೆ ಎಂತಹ ದುರಂತ ಹೆಣ್ಣುಮಗಳು ಎಂಬುದು ಮನವರಿಕೆಯಾಗುತ್ತದೆ. ಆದರೆ ಅದಕ್ಕೆ ಸೀತೆಯ ಮನಸ್ಸಿನಿಂದ ರಾಮಾಯಣ ಪ್ರವೇಶಿಸುವ ಎದೆಗಾರಿಕೆ ಬೇಕು. ಪ್ರಸ್ತುತ ಈ ನಾಟಕದಲ್ಲಿ ಅಂತಹ ದಿಟ್ಟತನವಿದೆ. ಹಾಗೂ ಇಂದಿನ ಸಂದರ್ಭಕ್ಕೆ ಸಮಕಾಲೀನಗೊಳಿಸುವ ಪ್ರಯತ್ನ ಇದಾಗಿದೆ ಎಂದು ನಾಟಕದ ವಿನ್ಯಾಸ, ರಚನೆ ಹಾಗೂ ನಿರ್ದೇಶಕರು ಆದ ಪ್ರಸಿದ್ಧ ರಂಗ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್ ಹೇಳಿದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಇದರ ಸಹಭಾಗಿತ್ವದಲ್ಲಿ ಮಂಗಳವಾರ ದಿನಾಂಕ 8/03/2016 ರಂದು ಸಂಜೆ 7.00 ಗಂಟೆಗೆ ಶಿವಮೊಗ್ಗದ ಸ್ಪೂರ್ತಿ ಸಾಂಸ್ಕೃತಿಕ ಸಂಸ್ಥೆಯವರಿಂದ ‘ಮೈಥಿಲಿ’ ಏಕವ್ಯಕ್ತಿ ಕನ್ನಡ ನಾಟಕವು ಸಂಘದ ಡಾ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಪ್ರದರ್ಶನ ಗೊಂಡಿತು. ಈ ಸಂದರ್ಭದಲ್ಲಿ ಡಾ. ಸಾಸ್ವೆಹಳ್ಳಿ ಸತೀಶ್ ನಾಟಕದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಖ್ಯಾತ ರಂಗಕರ್ಮಿ ಡಾ|| ಭರತ್ ಕುಮಾರ್ ಪೆÇಲಿಪು ರವರು ಸೀತೆಯ ಪಾತ್ರದ ಮೂಲಕ ಇಡಿಯ ರಾಮಾಯಣವನ್ನು ಆಧುನಿಕ ದೃಷ್ಟಿ ಕೋನದಲ್ಲಿ ವಿಶ್ಲೇಷಿಸಿದ ರೀತಿ ಪರಿಣಾಮಕಾರಿಯಾಗಿದೆ. ಸ್ತ್ರೀವಾದಿ ನೆಲೆಯಲ್ಲಿ ಸೀತೆಯ ಅಂತಃರಂಗವನ್ನು ಪದರ ಪದರ ವಾಗಿ ಬಿಡಿಸುತ್ತಾ ಆಕೆಯ ಮಾನಸಿಕ ತುಮುಲ, ನೋವು ಹತಾಶೆ ಹಾಗೂ ಬಂಡಾಯ ಮನೋಧರ್ಮವನ್ನು ಶಕ್ತಿಶಾಲಿಯಾಗಿ ನಿರೂಪಿಸಲಾಗಿದೆ. ಸುಪ್ರಿಯಾ ಎಸ್. ರಾವ್ರವರ ಸೃಜನಾತ್ಮಕ ಅಭಿನಯ, ಅರ್ಥಪೂರ್ಣವಾದ ಬೆಳಕು, ಸಂಗೀತದೊಂದಿಗೆ ನಾಟಕ ಅದ್ಭುತವಾಗಿ ಮೂಡಿ ಬಂದಿದೆ ಎಂದು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘದ ವತಿಯಿಂದ ಡಾ. ಸಾಸ್ವೆಹಳ್ಳಿ ಸತೀಶ್, ಸುಪ್ರಿಯಾ ಎಸ್. ರಾವ್, ಹಾಗೂ ಬೆಳಕು ಸಂಯೋಜಕರಾದ ಹರಿಗೆ ಗೋಪಾಲಸ್ವಾಮಿಯವರನ್ನು ಸಂಘದವತಿಯಿಂದ ಉಪಾದಕ್ಷರಾದ ಬಿ. ಜಿ. ನಾಯಕ್, ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ನೆನಪಿನ ಕಾಣಿಕೆ, ಪುಸ್ತಕಗೌರವ ನೀಡಿ ಗೌರವಿಸಿದರು.