ಮುಂಬಯಿ: ಸಂಗೀತ ವಿದ್ವಾಂಸರು, ಸಂಗೀತ ಕಲಿತ ವಿವಿಧ ಇಲಾಖೆಯ ಅಧಿಕಾರಿಗಳು, ಸಂಗೀತಾಭಿಮಾನಿಗಳ ಸಮಕ್ಷಮದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಗೋವರ್ಧನಾ ಕ್ಷೇತ್ರದಲ್ಲಿ ಸಂಗೀತ ವಿದ್ವಾಂಸ ನಾದವೈಭವಂ ಉಡುಪಿ ವಾಸುದೇವ ಭಟ್ ಅವರಿಗೆ ಪ್ರತಿಷ್ಠಿತ `ಸ್ವರಸುರಭ' 2015 ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕನ್ನಡದ ಖ್ಯಾತ ಸಾಹಿತಿ ಪ್ರೇಮಾ ಭಟ್ ಮತ್ತು ಆಶು ಸಾಹಿತಿ ಜಿ. ಆರ್ ಸುಬ್ರಮಣ್ಯ ಸಹಿತ ಗಣ್ಯರು ನಗದು ಸಹಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಇಡೀ ಜೀವಮಾನವನ್ನೇ ಸಂಗೀತ ಸಾಹಿತ್ಯ ಕಲೆಗಳಿಗಾಗಿ ಮೀಸಲಿಟ್ಟ ವಾಸುದೇವ ಭಟ್ ಅವರಿಗೆ ಅರ್ಹವಗಿ ಸಂದ ಗೌರವ ಇದು. ಸಂಗೀತಾಸಕ್ತರು ಸೇರಿ ಸಂಗೀತಕ್ಕಾಗಿಯೇ ಇಂತಹ ಕಾರ್ಯಕ್ರಮಗಳನ್ನು ಸ್ವರಸುರಭಿ ಟ್ರಸ್ಟ್ ಮೂಲಕ ಅಯೋಜಿಸುತ್ತಿರುವುದು ಅಭಿನಂದನೀಯ ಎಂದು ಪ್ರೇಮಾ ಭಟ್ ಹೇಳಿದರು.
ಗುರುಗಳು ಮತ್ತು ಒಳ್ಳೆಯ ವ್ಯಕ್ತಿ ಹೇಗಿರ ಬೇಕೆಂಬುದಕ್ಕೆ ವಾಸುದೇವ ಭಟ್ ಮತ್ತು ಅವರ ನಾದವೈಭವಂ ಸಂಸ್ಥೆ ಮಾದರಿಯಾಗಿದೆ ಎಂದು ಜಿ.ಆರ್.ಸುಬ್ರಮಣ್ಯ ಅವರು ಅಭಿಪ್ರಾಯ ಪಟ್ಟರು.
ಹಿಂದೂಸ್ಥಾನಿ ಕಲಾವಿದ ಪಂಡಿತ್ ಬಿ.ವಿ ರಾಧಾಕೃಷ್ಣ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ, ಪತ್ರಕರ್ತ ಶೇಖರ ಅಜೆಕಾರು, ಸುನಂದಾ ವಾಸುದೇವ ಭಟ್ ಅತಿಥಿüಗಳಾಗಿದ್ದರು.
ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಅಯ್ಯರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಎಂ.ಎಸ್.ಗಿರಿಧರ್ , ವಸುಧಾ ಮೊದಲಾದವರು ಸಹಕರಿಸಿದರು. ಸ್ವರ ಸುರಭಿಯ ಸುಗಮ ಸಂಗೀತೋತ್ಸವದಲ್ಲಿ ಹಲವಾರು ತಂಡಗಳು ಮತ್ತು ಹೆಸರಾಂತ ಕಲಾವಿದರು ತಮ್ಮ ಸಂಗೀತ ಪ್ರತಿಭೆ ಪ್ರದರ್ಶಿಸಿದರು.