ಮಂಗಳೂರು: ಕರ್ನಾಟಕ ರಾಜ್ಯ ಪತ್ರದ ಮೂಲಕ ರಾಜ್ಯದಲ್ಲಿ ನಿಷೇಧಿಸಲಾಗಿರುವ ಪ್ಲಾಸ್ಟಿಕ್ಗಳ ಉತ್ಪಾದನೆಯನ್ನು ತತ್ಕ್ಷಣ ಸ್ಥಗಿತಗೊಳಿಸುವಂತೆ ಉತ್ಪಾದಕರಿಗೆ ಸೂಚನೆ ನೀಡಿರುವ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಎಪ್ರಿಲ್ 15ರಿಂದ ಜಿಲ್ಲೆಯಲ್ಲಿ ಇವುಗಳ ಬಳಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಜಿಲ್ಲೆಯ ಪ್ಲಾಸ್ಟಿಕ್ ತಯಾರಕರು ಮುಖ್ಯವಾಗಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳನ್ನು ಉತ್ಪಾದನೆ ಮಾಡುವುದನ್ನು ಇವತ್ತಿನಿಂದಲೇ ಸ್ಥಗಿತಗೊಳಿಸಬೇಕು. ಮಾತ್ರವಲ್ಲದೆ ಈಗಾಗಲೇ ತಯಾರಾಗಿ ಸಂಗ್ರಹಿಸಿರುವ (ಸ್ಟಾಕ್) ನಿಷೇಧಿತ ಪ್ಲಾಸ್ಟಿಕ್ಗಳ ಮಾರಾಟವನ್ನು ಮಾರ್ಚ್ 31ರೊಳಗೆ ಮುಗಿಸಬೇಕು. ಸಗಟು ಮಾರಾಟಗಾರರಿಗೆ ಇದರ ಮಾರಾಟಕ್ಕೆ ಮುಂದಿನ 7 ದಿನಗಳ ವರೆಗೆ ಕಾಲಾವಕಾಶ ನೀಡಲಾಗುತ್ತಿದ್ದು, ಚಿಲ್ಲರೆ ಮಾರಾಟಗಾರು ಮತ್ತೆ ಮುಂದಿನ 7 ದಿನಗಳೊಳಗೆ ಮಾರಾಟ ಕೊನೆಗೊಳಿಸಬೇಕು. ಎಪ್ರಿಲ್ 15ರಿಂದ ಜಿಲ್ಲೆಯಲ್ಲಿ ಈ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.