ಹೆಬ್ರಿ, ಮಾ.26: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ಶತ ಕವಿ ಗೋಷ್ಠಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅದ್ಬುತ ಕೊಡುಗೆ. ಶೇಖರ ಅಜೆಕಾರು ನಡೆಸಿಕೊಟ್ಟ ಶತಮಾನದ ಮೊದಲ ಶತ ಕವಿ ಗೋಷ್ಠಿ ಎಂದು ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ| ವಸಂತ ಕುಮಾರ್ ಪೆರ್ಲ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಕಾರ್ಕಳದ ಸಾಣೂರು ಮುರತಂಗಡಿಯ ಪ್ರಕೃತಿ ಶಿಕ್ಷಣ ಸಮೂಹ ಸಂಸ್ಥೆಗಳ ಬಯಲು ರಂಗ ಮಂಟಪದ ಕಯ್ಯಾರ ಕಿಂಞಣ್ಣ ರೈ ವೇದಿಕೆಯಲ್ಲಿ ಹುಣ್ಣಿಮೆಯ ದಿನ ಬುಧವಾರ ಶ್ರೀ ವಿದ್ಯಾ ಸಂಸ್ಥೆ ಮೂಡುಬಿದಿರೆ ಅರ್ಪಿಸಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮುರತಂಗಡಿಯ ಪ್ರಕೃತಿ ಶಿಕ್ಷಣ ಸಮೂಹ ಸಂಸ್ಥೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ಣಾಟಕ ಬ್ಯಾಂಕ್ ಹಾಗೂ ಸರ್ವರ ಸಹಕಾರದಲ್ಲಿ ನಡೆದ ಅಖಿಲ ಕರ್ನಾಟಕ 7ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವಿಶೇಷ ಆಕರ್ಷಣೆ ಶತ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿ ಡಾ| ನಾ.ಮೊಗಸಾಲೆ ಕವಿ ಗೋಷ್ಠಿ ಉದ್ಘಾಟಿಸಿದರು. ಡಾ|ವಸಂತ ಕುಮಾರ್ ಪೆರ್ಲ ತನ್ನ ಕುಟುಂಬದ ಐವರು ಸದಸ್ಯರು ಮತ್ತು ಭವ್ಯಾ ಹರೀಶ್ ದಂಪತಿಗಳು ಕವಿ ಕುಟುಂಬವಾಗಿ ಕವಿತೆ ವಾಚಿಸಿ ಗಮನ ಸೆಳೆದರು. ತುಳು, ಕನ್ನಡ, ಹಿಂದಿ, ಉರ್ದು, ಕೊಂಕಣಿ,ಅರೆಭಾಷೆ,ಕುಂದಾಪ್ರ ಕನ್ನಡ ಭಾಷೆಯ 113 ಕವಿಗಳು ಶತಕವಿಗೋ ಷ್ಠಿಯಲ್ಲಿ ಕವಿತೆ ವಾಚನ ಮಾಡಿದರು. ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಉದ್ಘಾಟನಾ ಕವಿತೆ ವಾಚಿಸಿದರು. ಸಮ್ಮೇಳನದ ಸಂಘಟಕರಾದ ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮತ್ತು ನಿರಂತರ ಕನ್ನಡ ಹಾಗೂ ಸಾಹಿತ್ಯ ಸೇವೆಯನ್ನು ನಡೆಸುತ್ತಾ ಹೋಗುವುದಾಗಿ ತಿಳಿಸಿದರು.
ಉಡುಪಿ ನಾದ ವೈಭವಂನ ವಾಸುದೇವ ಭಟ್, ಸುಮ ಸೌರಭ ಪತ್ರಿಕೆ ಸಂಪಾದಕ ಎಂ.ಜೆ.ರಾವ್ ಅತಿಥಿಗಳಾಗಿದ್ದರು. ವಿಜಾಪುರ, ಮುಂಬಯಿ, ಬಾಗಲಕೋಟೆ, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಜಿಲ್ಲೆಗಳ ಕವಿಗಳು ರಾತ್ರಿ 10 ರಿಂದ ಬೆಳಗ್ಗೆವರೆಗೆ ಕವಿಗೋಷ್ಠಿ ನಡೆಯಿತು.