ಮಂಗಳೂರು: ಜಿಲ್ಲಾಡಳಿತ ಜಿಲ್ಲೆಯ 4 ಬ್ಲಾಕ್ಗಳಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ಕಲ್ಪಿಸಿದ್ದರೂ ಸ್ಟಾಕ್ಯಾರ್ಡ್ ಕೊರತೆಯಿಂದ ಮರಳುಗಾರಿಕೆ ಪ್ರಾರಂಭವಾಗದೆ ಸಮಸ್ಯೆ ಉಂಟಾಗಿತ್ತು. ಆದರೆ, ಕೊನೆಗೂ ಬಿ.ಸಿ. ರೋಡ್ ವೃತ್ತದ ಬಳಿ ಸೂಕ್ತ ಸ್ಟಾಕ್ಯಾರ್ಡ್ ನಿಗದಿಯಾಗುವುದರೊಂದಿಗೆ ಮರಳು ಕುರಿತು ಜಿಲ್ಲೆಯ ಜನರ ಬೇಡಿಕೆ ಪೂರ್ಣಗೊಳ್ಳುತ್ತಿದೆ.
ಸಿಆರ್ಝಡ್ಯೇತರ ಪ್ರದೇಶ ವ್ಯಾಪ್ತಿಯ ಸುಮಾರು 38 ಬ್ಲಾಕ್ಗಳ ಪೈಕಿ 23 ಬ್ಲಾಕ್ಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ನಲ್ಲಿ 11 ಮಂದಿ ಭಾಗವಹಿಸಿದ್ದು, ಅಂತಿಮವಾಗಿ 5 ಬ್ಲಾಕ್ಗಳನ್ನು ಗುರುತಿಸಲಾಗಿತ್ತು. ಇವುಗಳಲ್ಲಿ ಒಂದನ್ನು ಹೊರತುಪಡಿಸಿ ಸಜಿಪಪಡುವಿನ 2 ಬ್ಲಾಕ್, ಬರಿಮಾರು ಹಾಗೂ ಸಜಿಪ ಮುನ್ನೂರಿನ ತಲಾ ಒಂದು ಬ್ಲಾಕ್ಗಳಿಂದ ಸ್ಟಾಕ್ ಯಾರ್ಡ್ಗೆ ಮರಳು ಶೇಖರಿಸಿ ಅಲ್ಲಿಂದ ಜಿಲ್ಲೆಯಲ್ಲಿ ಮರಳು ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಂದು ಕ್ಯೂಬಿಕ್ ಮೀಟರ್ ಅಳತೆಯ ಮರಳಿಗೆ (ಒಂದು ಕ್ಯೂಬಿಕ್ ಮೀಟರ್ ಅಂದರೆ 1.7 ಟನ್) 403ರೂ. ಹಾಗೂ ರಾಜಧನ ಸೇರಿ 625 ರೂ. ಅನ್ನು (ಮರಳು ಸಾಗಾಟ ವೆಚ್ಚವನ್ನು ಹೊರತುಪಡಿಸಿ) ನಿಗದಿ ಪಡಿಸಲಾಗಿತ್ತು. ಜಿಲ್ಲೆಯ ನಿವಾಸಿಗಳ ಮನೆಕಟ್ಟುವ ಅವಶ್ಯಕತೆ ಪೂರೈಸಲು ಪ್ರಾಮುಖ್ಯತೆ ನೀಡುವಂತೆ ತಿಳಿಸಿದ್ದ ಜಿಲ್ಲಾಧಿಕಾರಿಗಳು ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದರು.
ಈ ನಿಟ್ಟಿನಲ್ಲಿ ಪಾಣೆಮಂಗಳೂರಿನಲ್ಲಿ ಸ್ಟಾಕ್ಯಾರ್ಡ್ ಮಾಡುವುದಾಗಿ ನಿರ್ಧರಿಸಲಾಗಿದ್ದು, ಅಲ್ಲಿಂದ ಜಿಲ್ಲೆಯಾದ್ಯಂತ ಮರಳು ಸಾಗಾಟ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಾರ್ವಜನಿಕರ ವಿರೋಧ ವ್ಯಕ್ತಪಡಿಸಿದ್ದರಿಂದ ಬೇರೆ ಕಡೆಯಲ್ಲಿ ಸ್ಟಾಕ್ಯಾರ್ಡ್ ಗುರುತಿಸಬೇಕಾದ್ದ ಪರಿಸ್ಥಿತಿ ಒದಗಿದ್ದರಿಂದ ಕಾಂಟ್ರಾಕ್ಟರ್ಗಳ ಮುಂಗೈಗೆ ಬೆಲ್ಲ ಸವರಿದಂತಾಗಿತ್ತು. ಆದರೆ, ಜಿಲ್ಲಾಧಿಕಾರಿ ಮಧ್ಯ ಪ್ರವೇಶದಿಂದ ಮೂರ್ನಾಲ್ಕು ಕಡೆಗಳಲ್ಲಿ ಸ್ಟಾಕ್ಯಾರ್ಡ್ ಗುರುತಿಸಿ ಕೊನೆಗೆ ಬಿಸಿ ರೋಡ್ ಬಳಿ ಮರಳು ಹಾಕಲು ನಿರ್ಧರಿಸುವುದರೊಂದಿಗೆ ಸಮಸ್ಯೆಗೆ ಇತಿಶ್ರೀ ಹಾಡಲಾಗಿದೆ.