ಮಂಗಳೂರು: ವಿದ್ಯಾರ್ಥಿ ಜೋಡಿಯೊಂದು ಸೋಮವಾರ ಮುಸ್ಸಂಜೆ ಹೊತ್ತು ನಗರದ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ ಬಳಿ ಇರುವ ಅಂದಾಜು 35 ಅಡಿ ಎತ್ತರದ ಬೃಹತ್ ಗಾತ್ರದ ನೀರಿನ ಟ್ಯಾಂಕ್ ಮೇಲೇರಿ ಆತಂಕ ಸೃಷ್ಟಿಸಿದ ಘಟನೆ ಸಂಭವಿಸಿದೆ. ಸುರತ್ಕಲ್ ಎನ್ಐಟಿಕೆಯಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಹರ್ಷೆಶ್ (21) ಮತ್ತು ಸುಪ್ರಿಯಾ (21) ಆತಂಕ ಸೃಷ್ಟಿಸಿದ ವಿದ್ಯಾರ್ಥಿಗಳು. ಸಂಜೆ 7.15 ರ ವೇಳೆಗೆ ನೀರಿನ ಟ್ಯಾಂಕ್ ಮೇಲೆ ಇಬ್ಬರು ವ್ಯಕ್ತಿಗಳಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಂದರು ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಂ, ಪಿಎಸ್ಐ ಮದನ್ ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿ ಟ್ಯಾಂಕ್ ಮೇಲಿದ್ದವರ ರಕ್ಷಣೆಗೆ ಕ್ರಮ ಆರಂಭಿಸಿದರು. ಪಿಎಸ್ಐ ಮದನ್ ಅವರು ಟ್ಯಾಂಕ್ನ ಏಣಿಯ ಮೂಲಕ ಮೇಲಕ್ಕೆ ಹತ್ತಿ ಇಬ್ಬರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು. ಟಾಗೋರ್ ಪಾರ್ಕಿಗೆ ಬಂದಿದ್ದ ತಾವು ಪರಿಸರ ವೀಕ್ಷಣೆಗಾಗಿ ಟ್ಯಾಂಕಿಗೆ ಜೋಡಿಸಿರುವ ಏಣಿಯ ಮೂಲಕ ಮೇಲಕ್ಕೆ ಹತ್ತಿದ್ದೆವು. ಹಾಗೆ ಮೇಲೇರಿದ ಬಳಿಕ ಟ್ಯಾಂಕ್ನ ಮೇಲೆ ಸುತ್ತ ಹೋಗಿ ಸುಂದರವಾದ ಪ್ರಕೃತಿ ವೀಕ್ಷಣೆ ಮಾಡಿದೆವು ಎಂದು ವಿದ್ಯಾರ್ಥಿ ಜೋಡಿ ತಿಳಿಸಿದೆ.