ಪಡುಬಿದ್ರಿ: ಉಚ್ಚಿಲ ಬಡಾಗ್ರಾಮದ ಪೊಲ್ಯ ಭಾಗದ ಸುಮಾರು 100 ಎಕರೆಗೂ ಮಿಕ್ಕಿ ಹಡೀಲು ಗದೆಯಲ್ಲಿ ಶನಿವಾರ ಎರಡೆರಡು ಬಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅದಾನಿ ಒಡೆತನದ ಯುಪಿಸಿಎಲ್ ಘಟಕದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡೂ ಬಾರಿ ತ್ವರಿತವಾಗಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿ ಮುಂದಾಗಲಿದ್ದ ಅನಾಹುತವನ್ನು ಹತೋಟಿಗೆ ತಂದಿರುತ್ತಾರೆ.
ಈ ಗದೆಯ ಪ್ರದೇಶಗಳು ಸುಜ್ಲಾನ್ ಘಟಕ ನಿರ್ಮಾಣದ ಹೆಸರಿನಲ್ಲಿ ವ್ಯಕ್ತಿಯೋರ್ವರಿಂದ ನೂರಾರು ಎಕರೆ ಕೃಷಿ ಭೂಮಿಯನ್ನು ಖರೀದಿಸಲಾಗಿದ್ದು, ಇದೀಗ ನಿಷ್ಪ್ರಯೋಜಕ ಬರಡು ಭೂಮಿಯಾಗಿ ಕಂಡು ಬರುತ್ತಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸುವಂತಾಗಿದೆ. ಸ್ಥಳ ಮಾರಾಟ ಮಾಡಿದವರು ಕೈ ಸುಟ್ಟುಕೊಂಡಂತಾಗಿದೆ ಎಂದು ಸ್ಥಳೀಯರು ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುತ್ತಾರೆ.
ಸತತವಾಗಿ 3, 4 ದಿನಗಳಿಂದಲೂ ಬೆಳಪು, ಮಲ್ಲಾರು, ಮೂಳೂರು, ಬಡಾಗ್ರಾಮಗಳ ಸರಹದ್ದಿನಲ್ಲಿರುವ ಸುಮಾರು 300 ಎಕರೆ ಹಡೀಲು ಬಿದ್ದ ಈ ಗದ್ದೆಯ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸುತ್ತಿದೆ.
ಈ ಸಂದರ್ಭ ಗ್ರಾ.ಪಂ. ಸದಸ್ಯ ವಸಂತ ದೇವಾಡಿಗ, ನ್ಯಾಯವಾದಿ ಚಂದ್ರಶೇಖರ ಶೆಟ್ಟಿ, ಮನೋಜ್ ಶೆಟ್ಟಿ, ಸುಲೋಚನಾ, ಶ್ರೀನಿವಾಸ ಭಟ್, ನಾಗೇಶ್ ಪೂಜಾರಿ, ಸುಧಾಕರ ಪೂಜಾರಿ, ಕೇಶವ ಶೆಟ್ಟಿ ಮತ್ತಿತರ ಸ್ಥಳೀಯ ನಿವಾಸಿಗಳು ಬೆಂಕಿ ಹರಡದಂತೆ ಸಹಕರಿಸಿರುತ್ತಾರೆ.