ಮಂಗಳೂರು: ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ತೆಗಳನ್ನು ರಾಜ್ಯ ಸರಕಾರಿ ನೌಕರರಿಗೂ ನೀಡುವ ಸಂಬಂಧ ಈ ಬಾರಿಯ ಬಜೆಟ್ನಲ್ಲಿ ಪ್ರಸ್ತಾವ ಮಂಡಿಸಲಾಗುವುದು ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿಯವರು, 2016-17ನೇ ಆಯ-ವ್ಯಯದಲ್ಲಿ ವಿಷಯ ಪ್ರಸ್ತಾವಿಸದಿರುವುದು ಅಸಮಾಧಾನ ತಂದಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ, ರಾಜ್ಯದಲ್ಲಿ 6ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ರಚಿತವಾದ ಅಧಿಕಾರಿಗಳ ವೇತನ ಸಮಿತಿ ಶಿಫಾರಸುಗಳು ಅವೈಜ್ಞಾನಿಕವಾಗಿರುವುದರಿಂದ ರಾಜ್ಯ ಸರಕಾರಿ ನೌಕರರು ಇಂದಿಗೂ ಕನಿಷ್ಠ ಶೇ. 20.51ರಿಂದ ಗರಿಷ್ಠ ಶೇ. 87.78ರ ವರೆಗೆ ವೇತನ ಹಾಗೂ ಭತ್ತೆಗಳಲ್ಲಿ ವ್ಯತ್ಯಾಸ ಕಾಣುತ್ತಿದ್ದಾರೆ ಎಂದರು.
ಪ್ರಸ್ತುತ ಕೇಂದ್ರ ಸರಕಾರದ 7ನೇ ವೇತನ ಆಯೋಗ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿ, ಜ. 2016ರಿಂದ ಅನ್ವಯಗೊಳ್ಳುವಂತೆ ಕೇಂದ್ರ ಸರಕಾರಿ ನೌಕರರಿಗೆ ಶೇ. 23.55ರಷ್ಟು ವೇತನ ಹಾಗೂ ಭತ್ತೆ ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಆದರೆ ಈ ಶಿಫಾರಸು ಅವೈಜ್ಞಾನಿಕವಾಗಿದ್ದು, ಕೆಳ ಹಂತದ ನೌಕರರಿಗೆ ಹೆಚ್ಚಿನ ಸವ ಲತ್ತು ದೊರಕದಿರುವ ಬಗ್ಗೆ ಕೇಂದ್ರ ಸರಕಾರಿ ನೌಕರರ ಸಂಘಟನೆಗಳು ಅಪಸ್ವರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಪುಟ ದರ್ಜೆ ಕಾರ್ಯದರ್ಶಿಯವರ ನೇತೃತ್ವದಲ್ಲಿ ಶಿಫಾರಸು ಗಳ ಪುನರ್ ಪರಿಶೀಲನೆಗೆ ಉಪ ಸಮಿತಿ ರಚಿಸಿದೆ.
ಪ್ರಸ್ತುತ ಕೇಂದ್ರ ಸರಕಾರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ್ದಲ್ಲಿ ಕನಿಷ್ಠ ಶೇ. 44.6ರಿಂದ ಗರಿಷ್ಠ ಶೇ. 111.33ರ ವರೆಗೆ ವ್ಯತ್ಯಾಸ ಉಂಟಾಗಲಿದೆ. ರಾಜ್ಯ ಸರಕಾರ ಸಂಘದ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮುಂದೆ ಅನಿರ್ದಿ ಷ್ಟಾವಧಿ ಮುಷ್ಕರ ಹೂಡುವ ಬಗ್ಗೆ ಚಿಂತಿಸಲಾಗುವುದು. ಅಲ್ಲದೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.