ಮಂಗಳೂರು: ಕೇಂದ್ರ ಸರಕಾರ ಬೆಳೆ ನಾಶ ಪರಿಹಾರಕ್ಕೆ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ರಾಜ್ಯ ಸರಕಾರದ ವತಿಯಿಂದ ದುರ್ಬಳಕ್ಕೆ ನಡೆದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಆರೋಪಿಸಿದ್ದಾರೆ.ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರ ಬೆಳೆನಾಶ ಪರಿಹಾರವಾಗಿ 1,541 ಕೋ. ರೂ. ಬಿಡುಗಡೆ ಮಾಡಿತ್ತು. ಇದನ್ನು ಎಲ್ಲ ಜಿಲ್ಲೆಗಳಿಗೆ ತಲುಪಿಸಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಈ ಹಣ ರೈತರಿಗೆ ಸಮರ್ಪಕವಾಗಿ ತಲುಪಿಲ್ಲ ಎಂದರು.ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಕುಡಿಯುವ ನೀರಿನ ಅಭಾವ ಕಾಡಿದೆ. ವಿದ್ಯುತ್ಛಕ್ತಿ ಕೊರತೆ ಬಿಗಡಾಯಿಸಿದೆ.
ಒಟ್ಟಾರೆ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಇದೆ. ರಾಜ್ಯ ಸರಕಾರ ಇದರ ಗಂಭೀರತೆ ಅರಿತು ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿತ್ತು. ಆದರೆ ಸರ ಕಾರದ ವತಿಯಿಂದ ಯಾವುದೇ ಕಾರ್ಯಕ್ರಮ ಕಾಣುತ್ತಿಲ್ಲ. ಇದೊಂದು ನಿಷ್ಕ್ರೀಯ ಸರಕಾರವಾಗಿದೆ ಎಂದು ಕುಮಾರ ಸ್ವಾಮಿ ಟೀಕಿಸಿದರು.