ಮೂಲ್ಕಿ: ಜಿಲ್ಲೆಯ ಯಾವುದೇ ಭಾಗದಲ್ಲಾದರು ಖಾಲಿ ಇರುವ ಜಮೀನನ್ನು ಸರ್ಕಾರವೇ ಖರೀದಿಸಿ, ಕೊರಗ ಸಮುದಾಯಕ್ಕೆ ಕೃಷಿ ಮತ್ತಿತರ ಚಟುವಟಿಕೆಗಾಗಿ ಉಚಿತವಾಗಿ ಹಸ್ತಾಂತರಿಸುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ, ಗ್ರಾಮ ವಾಸ್ತವ್ಯದಿಂದ ಕೊರಗ ಸಮುದಾಯದ ವಾಸ್ತವತೆಯ ಚಿತ್ರಣವನ್ನು ಕಂಡಿದ್ದೇನೆ, ಸುಮಾರು ಒಂದು ಕೋಟಿ ವೆಚ್ಚದ ವಿಶೇಷ ಪ್ಯಾಕೇಜನ್ನು ಕೆರೆಕಾಡಿನ ಕೊರಗ ಕಾಲೋನಿಗೆ ಸರ್ಕಾರದಿಂದ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಅವರು ಮೂಲ್ಕಿ ಬಳಿಯ ಕೆರೆಕಾಡಿನಲ್ಲಿ ಶನಿವಾರ ಆದಿವಾಸಿಗಳ ಹಾಡಿಗೆ ಸರ್ಕಾರ ಎನ್ನುವ ಕಾರ್ಯಕ್ರಮದಲ್ಲಿ ಕೆರೆಕಾಡಿನ ಕೊರಗ ಕಾಲೋನಿಗೆ ತಮ್ಮ ವಾಸ್ತವ್ಯವನ್ನು ಸಮಾಪ್ತಿಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಖಾಲಿ ಇರುವ ಜಮೀನಾಗಲಿ ಅಥವ ಡಿಸಿ ಮನ್ನಾ ಸ್ಥಳವಾಗಲಿ ಈ ಬಗ್ಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಕೆರೆಕಾಡಿನ ಕಾಲೋನಿಗೆ ಒಂದು ಎಕರೆ ಪ್ರದೇಶವನ್ನು ಖರೀದಿಸಲು ಪಂಚಾಯಿತಿಗೆ ತಿಳಿಸಲಾಗಿದೆ, ಕೊರಗ ಸಮುದಾಯದ ಆರೋಗ್ಯದ ಸಮಸ್ಯೆಯಿಂದ ಜನಸಂಖ್ಯೆ ಕ್ಷೀಣವಾಗುತ್ತಿದೆ, ಯುವಕರಿಗೆ ಕ್ಯಾಟರಿಂಗ್ನಂತಹ ಸಾಮೂಹಿಕ ಸ್ವ ಉದ್ಯೋಗಕ್ಕೆ ಪ್ರೇರಣೆ ಆಗಲು ವಿಶೇಷ ಸಬ್ಸಿಡಿ ಸಾಲ ಯೋಜನೆಯನ್ನು ಮಂಜೂರು ಮಾಡಲಾಗುವುದು. ಅಭಿವೃದ್ಧಿಗಾಗಿ ಎಲ್ಲರೂ ಪರಸ್ಪರ ಕೈ ಜೋಡಿಸಬೇಕು ಎಂದರು.
ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ರವರು ಭೇಟಿ ನೀಡಿ ಮಾತನಾಡಿ, ಜನಪ್ರತಿನಿಧಿಗಳು ಯಾವತ್ತು ಜನರೊಂದಿಗೆ ಇರುವವರು, ಸಚಿವರ ಇಂತಹ ಗ್ರಾಮ ವಾಸ್ತವ್ಯದಿಂದ ಸಮಸ್ಯೆಯನ್ನು ಹುಡುಕಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣ ಆಗುತ್ತದೆ, ಇದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಿದೆ, ಕಾರ್ನಾಡು ಸದಾಶಿವ ರಾಯ ಹೋರಾಟದ ಹುಟ್ಟೂರಿನಲ್ಲಿ ಸಚಿವರ ಕ್ರಮ ಶ್ಲಾಘನೀಯ, ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ, ಸಿದ್ಧರಾಮಯ್ಯರ ಸರ್ಕಾರ ಜನಪರವಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.
ಶಾಸಕ ಮೊಯ್ದಿನ್ ಬಾವ ಭೇಟಿ ನೀಡಿ ಮುಂದಿನ ಗ್ರಾಮ ವಾಸ್ತವ್ಯವವನ್ನು ತಮ್ಮ ಕ್ಷೇತ್ರದಲ್ಲಿನ ಮದ್ಯ ಪ್ರದೇಶದಲ್ಲಿ ನಡೆಸಬೇಕು, ಹಾಗೂ ಅತಿ ಹೆಚ್ಚು ಅನುದಾನವನ್ನು ನೀಡಿ ಸಹಕರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ದಾಸ್, ಉಪಾಧ್ಯಕ್ಷೆ ಸುರೇಖಾ, ತಹಶೀಲ್ದಾರ್ ಇಸಾಕ್ ಮೊಹಮ್ಮದ್, ಸಮಾಜ ಕನ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಕಾಂಗ್ರೆಸ್ನ ಎಚ್.ವಸಂತ ಬೆರ್ನಾರ್ಡ್, ದಲಿತ ಸಂಘಟನೆಯ ಇಸುಕುಮಾರ್, ಮಂಜುನಾಥ್, ಸುರೇಶ್ ಕೆರೆಕಾಡು, ಸ್ಥಳೀಯ ನಾಯಕರು ಇನ್ನಿತರರು ಹಾಜರಿದ್ದರು.
ಸಚಿವ ಆಂಜನೇಯನವರು ಬೆಳಿಗ್ಗೆ 5-10ಕ್ಕೆ ಸ್ಥಳೀಯರೊಂದಿಗೆ ಕೆರೆಕಾಡಿನ ಪರಿಸರದಿಂದ ಪುನರೂರು ದೇವಸ್ಥಾನದ ದ್ವಾರದವರೆಗೆ ತೆರಳಿ ಮರಳಿ ಕಾಲೋನಿಗೆ ವಾಕಿಂಗ್ ಮಾಡಿದರು. ಕಾಲೋನಿಯ ಎಲ್ಲಾ ಮನೆಗೂ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಕೆಲವೊಂದು ಸಲಹೆ ನೀಡಿದರು. ಕಾಲೋನಿಯ ಮೂಲಬೂತ ಸೌಕರ್ಯಕ್ಕೆ ಪ್ಯಾಕೇಜ್ನಲ್ಲಿ ಅನುದಾನ ಬಳಸಲು ಸೂಚಿಸಿದರು. ತಾವಿದ್ದ ಮನೆ ಮಾಲಕಿ ಬೇಬಿ ಹಾಗೂ ಅವರ ಮನೆಯವರಿಂದ ಸಂಪ್ರದಾಯಬದ್ದವಾಗಿರುವ ವಿಶೇಷ ಆತಿಥ್ಯವನ್ನು ಸ್ವೀಕರಿಸಿದರು.
ಅಧಿಕಾರಿಗಳಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ನ ಪ್ರಮುಖರಲ್ಲಿ ಇಲ್ಲಿನ ಸಮಸ್ಯೆಗಳು ಪರಿಹಾರ ಕಾಣಲು ಆಗಾಗ ತಮಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.