ಮಂಗಳೂರು: ರಾಜ್ಯದಲ್ಲಿ 100 ಎಕ್ರೆ ಜಾಗಕ್ಕಿಂತ ಹೆಚ್ಚು ಜಮೀನು ಲಭ್ಯವಿರುವ ಕಡೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಲೇಔಟ್ ಮಾದರಿಯಲ್ಲಿ ಭೂಮಿ ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಸಚಿವರು ಖಾಸಗಿ ಅವರು 100 ಎಕ್ರೆ ಜಮೀನು ನೀಡಲು ಬಯಸಿದರೆ ಇದನ್ನು ಖರೀದಿಸಲು ಇಲಾಖೆ ಸಿದ್ದವಿದೆ. ಈ ಜಮೀನಿಗೆ ಸರಕಾರದ ನಿಗದಿತ ದರಕ್ಕಿಂತ ಮೂರು ಪಟ್ಟು ದರ ನೀಡಲು ಸಿದ್ದರಿದ್ದೇವೆ ಎಂದರು.
ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಕೋರಿ ಬರುವ ವಿದ್ಯಾರ್ಥಿಯನ್ನು ಹಿಂದಕ್ಕೆ ಕಳುಹಿಸಬಾರದು. ಒಂದೊಮ್ಮೆ ಅಲ್ಲಿ ಸ್ಥಳಾವಕಾಶದ ಕೊರತೆ ಇದ್ದರೆ ಬೇರೆಡೆ ಹೆಚ್ಚುವರಿಯಾಗಿ ಸ್ಥಳಾವಕಾಶ ವ್ಯವಸ್ಥೆಗೊಳಿಸಬೇಕು. ಒಂದೊಮ್ಮೆ ಹಿಂದಕ್ಕೆ ಕಳುಹಿಸಿದ ಪ್ರಕರಣಗಳು ಕಂಡುಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದರು.