ಮಂಗಳೂರು: ಜಾತ್ರೆ ಮಹೋತ್ಸವ, ಮದುವೆ, ಭೂತಕೋಲ, ಯಕ್ಷಗಾನ ಹಾಗೂ ಇನ್ನಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ಸುಡುಮದ್ದು ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯುವುದನ್ನು ದ.ಕ. ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುಡುಮದ್ದು ತಯಾರಕರು, ಸಂಗ್ರಾಹಕರು ಹಾಗೂ ಮಾರಾಟಗಾರರ ಸಭೆಯಲ್ಲಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಕೇರಳದ ಕೊಲ್ಲಂನಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಮುಂಜಾಗರೂಕತಾ ಕ್ರಮವಾಗಿ ಈಗಾಗಲೇ ಹಲವು ಕ್ರಮಕೈಗೊಂಡಿದೆ.
ಸುಡುಮದ್ದು ಪ್ರದರ್ಶನ ಬಯಸುವವರು 10 ದಿನ ಮುಂಚಿತವಾಗಿ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ಪ್ರದರ್ಶನದ ದಿನಾಂಕ ಹಾಗೂ ಪ್ರದರ್ಶನದ ಸಂದರ್ಭ ಎಷ್ಟು ಮಂದಿ ಸಿಬಂದಿಯನ್ನು ನಿಯೋಜಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವುದು ಕೂಡ ಮುಖ್ಯ ಎಂದು ವಿವರಿಸಿದರು.ಸುಡುಮದ್ದುಗಳನ್ನು ಅಂಗೀಕೃತ ಸಂಸ್ಥೆ/ವ್ಯಕ್ತಿಗಳಿಂದಲೇ ಸಿಡಿಸಲು ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಸುಡುಮದ್ದುಗಳ ಪ್ರದರ್ಶನ ನಡೆಸಿದಲ್ಲಿ ಸ್ಫೋಟಕ ನಿಯಮಗಳ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದುಎಂದು ಅವರು ಎಚ್ಚರಿಕೆ ನೀಡಿದರು.