ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಅವರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಶನ್ಸ್ ಇಂಡಿಯಾ ಸಂಸ್ಥೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಆಸ್ಪತ್ರೆಯಲ್ಲಿ ಖಾಸಗಿ ಲ್ಯಾಬ್ ತೆರೆಯಲು ಟೆಂಡರ್ ಸಿಕ್ಕಿರುವ ವಿಚಾರದಲ್ಲಿ ಮುಖ್ಯಮಂತ್ರಿಯವರಿಂದ ಯಾವುದೇ ಸ್ವಜನ ಪಕ್ಷಪಾತ ನಡೆದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ನಡೆದ ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವರು ಸುದ್ದಿಗಾರರ ಜತೆ ಮಾತನಾಡಿದರು. ವಿಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಆದ್ದರಿಂದ ಮುಖ್ಯಮಂತ್ರಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ಇದು ದ್ವೇಷದ ರಾಜಕಾರಣ. ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿವೆ ಎಂದರು. ಈ ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದ ಲ್ಯಾಬ್ ದಿನದ 24 ಗಂಟೆ ಕಾಲವೂ ಸೇವೆ ಒದಗಿಸುತ್ತಿರಲಿಲ್ಲ. 24ಗಿ7 ಕಾಲವೂ ಸೇವೆ ಒದಗಿಸುವ ಲ್ಯಾಬ್ಗಾಗಿ ಹೊಸ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ನಲ್ಲಿ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಶನ್ ಇಂಡಿಯಾ ಸಂಸ್ಥೆ ಭಾಗವಹಿಸಿ ಟೆಂಡರ್ ವಹಿಸಿಕೊಂಡಿದೆ.ಯಾವುದೇ ಒತ್ತಡ ತರುವ ಕೆಲಸ ಆಗಿಲ್ಲ. ಎಲ್ಲ ಪ್ರಕ್ರಿಯೆಗಳು ಕಾನೂನು ಬದ್ಧವಾಗಿ ನಡೆದಿವೆ ಎಂದು ತಿಳಿಸಿದರು.