ಮಂಗಳೂರು: ದ.ಕ. ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆ ಜತೆಗೆ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪು ಮತ್ತು ಆಶಾ ಕಾರ್ಯಕರ್ತೆಯರ ತಂಡ ಯೋಜನಾಬದ್ಧರಾಗಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದ.ಕ. ಜಿ.ಪಂ.ನಲ್ಲಿ ಶನಿವಾರ ಇಲಾಖೆ ಕುರಿತ ಪ್ರಗತಿ ಪರಿಶೀಲನೆ ನಡೆಸಿದ ಅವರು, ಈ ಮೊದಲು ಶಿಶು ಮರಣ 1 ಲಕ್ಷ ಜನನಕ್ಕೆ 10.22 ಇದ್ದುದು, ಈ ಸಾಲಿನಲ್ಲಿ 10.80ಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ತಾಯಿ ಮರಣ ಪ್ರಮಾಣವೂ 1 ಲಕ್ಷ ಜನನಕ್ಕೆ 8ರಿಂದ 22ಕ್ಕೆ ಏರಿಕೆಯಾಗಿದೆ. ತಾಯಂದಿರ ಹಾಗೂ ಶಿಶು ಮರಣ ಇಳಿಮುಖವಾಗಬೇಕು. ಅದಕ್ಕೆ ಇಲಾಖೆ ಹಾಗೂ ಸಂಬಂಧಪಟ್ಟವರು ಕಾರ್ಯತಂತ್ರ ರೂಪಿಸಬೇಕು. ರಕ್ತಹೀನತೆ ಇರುವ ಗರ್ಭಿಣಿಯರನ್ನು ಆರೋಗ್ಯ ಕಾರ್ಯಕರ್ತರು ಗುರುತಿಸಿ ಅವರಿಗೆ ನಿಗದಿತ ಔಷಧ ನೀಡಬೇಕು. ವಿಶೇಷ ಎಂಬಂತೆ ಅವರ ಮೇಲೆ ನಿಗಾ ಇರಿಸಬೇಕು ಎಂದರು.