ಮಂಗಳೂರು: ದಕ್ಷಿಣ ಕನ್ನಡದ 5 ಸೇರಿದಂತೆ ಕರಾವಳಿಯ ಜಿಲ್ಲೆಯ 23 ಬೀಚ್ಗಳು ಹಾಗೂ 4 ಹೈಲ್ಯಾಂಡ್ಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ವಿಶೇಷ ಒತ್ತು ನೀಡಿದ್ದು, ಈ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರವಾಸಿ ಸೌಲಭ್ಯದ ವಿವಿಧ ಕಾಮಗಾರಿಗಳ ಹಾಗೂ ಕೆಎಸ್ಟಿಡಿಸಿ ಪ್ರವಾಸಿ ಬಸ್ ಸೌಲಭ್ಯಕ್ಕೆ ಅವರು ರವಿವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಪ್ರವಾಸೋದ್ಯಮ ಸರಿಯಾಗಿ ಬೆಳೆದಿಲ್ಲ.ತಲಪಾಡಿ, ಸುರತ್ಕಲ್, ಉಳ್ಳಾಲ, ಸೋಮೇಶ್ವರ ಹಾಗೂ ತಣ್ಣೀರುಬಾವಿ ಬೀಚ್ ಅಭಿವೃದ್ಧಿಗಾಗಿ 13 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಮೂಲಕ ಅಗತ್ಯವಿರುವ ರಸ್ತೆ, ಸುರಕ್ಷತೆ, ದೀಪ ಮುಂತಾದ ವವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದರು.
ಮಂಗಳೂರಿನ ಪಿಲಿಕುಳ ನಿಸರ್ಗಧಾಮವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ, ವಿಶ್ವವನ್ನೇ ಆಕರ್ಷಿಸುವ ನಿಸರ್ಗಧಾಮವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ನಡೆಯಬೇಕಿವೆ. ಇಲ್ಲಿನ ಅಭಿವೃದ್ಧಿಯಲ್ಲಿ 7-8 ಸರಕಾರಿ ಇಲಾಖೆಗಳ ಸಂಗಮವಿರುವುದರಿಂದ ಜಿಲ್ಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಡಿ 4 ಕೋಟಿ ರೂ. ನೀಡಲಾಗಿದ್ದು, ಅಭಿವೃದ್ಧಿಯ ನಿಟ್ಟಿನಲ್ಲಿ ಇನ್ನೂ 3 ಕೋಟಿ ರೂ. ನೀಡಲಾಗುವುದು. ಅಲ್ಲದೆ ವರ್ಷಂಪ್ರತಿ ಅನುದಾನ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.