ಮಂಗಳೂರು: ಕೊಂಕಣಿ ಭಾಷೆಯು ಕನ್ನಡದ ಸೋದರ ಭಾಷೆಯಾಗಿದ್ದು, ಈ ಭಾಷೆಯ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಗುರುವಾರ ಘೋಷಿಸಿದರು.
ಕೊಂಕಣಿಯ ಮುಂಚೂಣಿಯ ಸಾಂಸ್ಕೃತಿಕ ಸಂಸ್ಥೆ "ಮಾಂಡ್ ಸೊಭಾಣ್' ಪ್ರವರ್ತಿತ ಕೊಂಕಣಿ ಮ್ಯೂಸಿಯಂನ ಶಿಲಾನ್ಯಾಸವನ್ನು ಮಂಗಳೂರಿನ ಶಕ್ತಿನಗರದ ಕಲಾಂಗಣ್ನಲ್ಲಿ ನೆರವೇರಿಸಿ ಮಾತನಾಡಿದರು.
ಕೊಂಕಣಿಯನ್ನು ಕ್ರೈಸ್ತರು, ಹಿಂದೂಗಳು ಮತ್ತು ಮುಸ್ಲಿಮರು ಮಾತನಾಡುತ್ತಾರೆ. ಕರ್ನಾಟಕದಲ್ಲಿ ಈ ಭಾಷೆಗೆ 450 ವರ್ಷಗಳ ಇತಿಹಾಸವಿದ್ದು, ಕನ್ನಡಿಗರ ಜತೆ ಕೊಂಕಣಿಗರು ಒಂದಾಗಿದ್ದಾರೆ. ರಾಜ್ಯದ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದರು. ಕೊಂಕಣಿ ಮ್ಯೂಸಿಯಂಗೆ ಈ ವರ್ಷದ ಬಜೆಟ್ನಲ್ಲಿ 2.5 ಕೋಟಿ ರೂ. ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡೋಣ. ಮ್ಯೂಸಿಯಂನ್ನು ಚೆನ್ನಾಗಿ ಕಟ್ಟಿಸಿ ಎಂದು ಮುಖ್ಯಮಂತ್ರಿ ಹೇಳಿದರು.
ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠಕ್ಕೆ 2 ಕೋಟಿ ರೂ. ನೀಡಲಾಗಿದೆ. ಬಾಸೆಲ್ ಮಿಶನ್ ಕೈಗೆತ್ತಿಕೊಂಡಿರುವ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಚಟುವಟಿಕೆಗೆ 2.5 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು