ಮಂಗಳೂರು: ಉಳ್ಳಾಲ, ಕೋಟೆಕಾರು ಹಾಗೂ ಮಾರ್ಗ ನಡುವಿನ 15 ಹಳ್ಳಿಗಳಿಗೆ ಸಮಗ್ರ ಕುಡಿಯುವ ನೀರಿನ ಸರಬರಾಜು ಯೋಜನೆ ಅನುಷ್ಠಾನಗೊಳಿಸಲು 15 ಲಕ್ಷ ರೂ. ವೆಚ್ಚದಲ್ಲಿ ಪೂರಕ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ದ.ಕ. ಜಿಲ್ಲೆಗೆ ಭೇಟಿ ನೀಡಿದ ವೇಳೆ ಜಿಲ್ಲಾಡಳಿತದಿಂದ ಸಲ್ಲಿಸಿದ ಬೇಡಿಕೆಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತುಂಬೆ ಡ್ಯಾಂನಿಂದ ನೇತ್ರಾವತಿ ನದಿಯ ದಕ್ಷಿಣ ಭಾಗದ ಪ್ರದೇಶಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಯವರಿಗೆ ಅಂದಾಜು 198 ಕೋಟಿ ರೂ. ಬೇಡಿಕೆ ಮುಂದಿಡಲಾಗಿದೆ. ನೀರುಮಾರ್ಗ, ಅಡ್ಯಾರು, ತುಂಬೆ, ಉಳಾಯಿಬೆಟ್ಟು ಮತ್ತು ಇತರ 132 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಪಾಲಿಕೆಯಿಂದ ಹಳೆಯ 2.25 ಎಂಜಿಡಿ ಸ್ಥಾವರವನ್ನು ಜಿಲ್ಲಾ ಪಂಚಾಯತ್ಗೆ ಹಸ್ತಾಂತರಿಸಲು ಈಗಾಗಲೇ ಪ್ರಸ್ತಾವಿಸಲಾಗಿದೆ. ಈ ಯೋಜನೆ ಸಂಬಂಧಿಸಿದ ಕಾಮಗಾರಿ ಕೈಗೆತ್ತಿಕೊಳ್ಳಲು 25.71 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಸರಕಾರದ ಅನುಮೋದನೆ ದೊರೆತಲ್ಲಿ ಕೆಲಸ ಶೀಘ್ರವಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ವಿವರಿಸಿದರು.