ಮಂಗಳೂರು: ಮಂಗಳೂರಿನಲ್ಲಿ ನೀರಿನ ಅಭಾವ ಕಾಡಿದ ಹಿನ್ನೆಲೆಯಲ್ಲಿ ನದಿಪಾತ್ರದಲ್ಲಿ ಕೃಷಿಗೆ ನೀರು ಬಳಸದಂತೆ ರೈತರನ್ನು ಮನವೊಲಿಸುವ ನಿಟ್ಟಿನಲ್ಲಿ ವಿಶೇಷ ಸಭೆಯು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ದ.ಕ. ಜಿಲ್ಲೆಯ ಬಂಟ್ವಾಳದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಕಳೆದ ಮಂಗಳವಾರದಿಂದ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಅದರಂತೆ ಕುಡಿಯುವ ನೀರಿನ ಅವಶ್ಯಕತೆ ಹಿನ್ನೆಲೆಯಲ್ಲಿ ನದಿ ಪಾತ್ರದ ಕೃಷಿಕರು ನದಿ ನೀರನ್ನು ಕೃಷಿಗೆ ಬಳಸದೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಲು ಸಹಕರಿಸಬೇಕು, ಏಕಾಏಕಿ ವಿದ್ಯುತ್ ಕಡಿತಗೊಳಿಸಿ ಪಂಪ್ಗಳನ್ನು ನಿಷ್ಕ್ರೀಯಗೊಳಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿಗೆ ನೀಡದೆ ರೈತರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಸಭೆ ಕರೆಯಾಗಿದೆ ಎಂದು ಮಾಹಿತಿ ನೀಡಿದರು.
ರೈತರೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ರೈತರ ಅಹವಾಲುಗಳನ್ನು ಆಲಿಸಿ ವಾರದ ಎರಡು ದಿನಗಳಲ್ಲಿ ಮಾತ್ರ ರೈತರಿಗೆ ವಿದ್ಯುತ್ ನೀಡಿ ಮಂಗಳೂರಿನ ನೀರು ಒದಗಿಸಲು ಸಹಕಾರ ನೀಡಲು ಸಭೆ ತೀರ್ಮಾನಿಸಿತು. ಉಳಿದ ಐದು ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಸರಬರಾಜು ಮಾಡಲು ರೈತರು ಒಪ್ಪಿಕೊಂಡರು.