ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಬೀಡಿ ಉದ್ದಿಮೆ ವಿರೋಧಿ ನೀತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ.
ಕೇಂದ್ರ ಸರಕಾರದ ಈ ನೀತಿ ವಿರುದ್ಧ ಜಿಲ್ಲೆಯಲ್ಲಿ ಪ್ರಬಲ ಹೋರಾಟ ರೂಪುಗೊಳ್ಳಬೇಕಾದ ಆವಶ್ಯಕತೆಯಿದ್ದು, ಇದರ ನೇತೃತ್ವವನ್ನು ಕಾಂಗ್ರೆಸ್ ಕಾರ್ಮಿಕ ವಿಭಾಗ ವಹಿಸಿಕೊಳ್ಳಬೇಕು ಎಂದು ಸಚಿವ ಬಿ. ರಮಾನಾಥ ರೈ ಕರೆ ನೀಡಿದರು.ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ ವತಿಯಿಂದ ಮಂಗಳೂರಿನ ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರವಿವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಹಾಗೂ ವಿವಿಧ ವರ್ಗಗಳ ಹಿರಿಯ ಕಾರ್ಮಿಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೋನಸ್, ಹೆರಿಗೆ ಭತ್ತೆ, ಬೀಡಿ ಕಾರ್ಮಿಕರ ಕಲ್ಯಾಣ ನಿಧಿ, ಪ್ರತ್ಯೇಕ ಆಸ್ಪತ್ರೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬೀಡಿಕಾರ್ಮಿಕರಿಗೆ ಕೇಂದ್ರದ ಹಿಂದಿನ ಕಾಂಗ್ರೆಸ್ ಸರಕಾರ ನೀಡಿದೆ.
ಆದರೆ ಪ್ರಸ್ತುತ ಸರಕಾರ ಬೀಡಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಿ ಪ್ರಹಾರ ನಡೆಸಿದೆ ಎಂದರು.ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಐವನ್ ಡಿ'ಸೋಜಾ,ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಸಾಹುಲ್ ಹಮೀದ್, ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.