ಮಂಗಳೂರು: ಪರೀಕ್ಷಾ ಫಲಿತಾಂಶದಲ್ಲಿ ವಿಳಂಬ ಹಾಗೂ ಗೊಂದಲ ನಿವಾರಣೆಗೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ಎಲ್ಲಾ ವಿಷಯಗಳ ವಿದ್ಯಾರ್ಥಿಗಳು ಶುಕ್ರವಾರ ವಿಜ್ಞಾನ ಬ್ಲಾಕ್ ಎದುರುಗಡೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪರೀಕ್ಷಾಂಗ ಕುಲಸಚಿವರಿಂದ ಸರಿಯಾದ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಮತ್ತೆ ಆಡಳಿತ ಸೌಧದ ಎದುರು ಧರಣಿ ನಡೆಸಿ ಉಪಕುಲಪತಿಗಳ ಪ್ರತಿಕ್ರಿಯೆಗೆ ಆಗ್ರಹಿಸಿದರು.
ಒಂದೇ ವಿಷಯದ ಅರ್ಧ ಮಂದಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದರೆ, ಇನ್ನರ್ಧ ವಿದ್ಯಾರ್ಥಿಗಳ ಫಲಿತಾಂಶವೇ ಬಂದಿಲ್ಲ. ಆರಿಸಿದ ವಿಷಯ ಬಿಟ್ಟು ಬೇರೆ ವಿಷಯದ ಮಾರ್ಕ್ಸ್ ಬಂದಿದೆ. ಎರಡು ತಿಂಗಳು ವಿಳಂಬವಾಗಿ ಬಂದ ಫಲಿತಾಂಶವೂ ಗೊಂದಲಮಯವಾಗಿರುವುದರಿಂದ ನಾಲ್ಕನೇ ಸೆಮಿಸ್ಟರ್ ಅವಧಿಯೂ ಕಳೆದಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದವರೇ ನ್ಯಾಯ ದೊರಕಿಸುವಲ್ಲಿ ವಿಫಲರಾಗಿರುವುದು ಬೇಸರದ ಸಂಗತಿ ಎಂದು ಪ್ರತಿಭಟನಾಕಾರರು ಆರೋಪಿಸಿದರು.