ಮಂಗಳೂರು: ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 5.6 ಅಡಿಗೆ ಇಳಿಕೆಯಾಗಿದ್ದು, ತುಂಬಿರುವ ಮರಳು ತೆರವುಗೊಳಿಸಲು ನಿರ್ಧರಿಸಲಾಗಿದೆ. ಮಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮಾಹಿತಿ ನೀಡಿದ ಮನಪಾ ಆಯುಕ್ತ ಡಾ| ಗೋಪಾಲಕೃಷ್ಣ ಪ್ರಸ್ತುತ ಲಭ್ಯ ನೀರಿನ ಪ್ರಮಾಣದ ಅವಲೋಕನದಂತೆ ಒಟ್ಟು 7 ದಿನ ನೀರೆತ್ತಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು 3 ದಿನಗಳಿಗೊಮ್ಮೆ ಎತ್ತಿದರೆ 21 ದಿನಗಳವರೆಗೆ ಮುಂದೂಡಬಹುದು. ಇದರಲ್ಲಿ ಒಟ್ಟು 3 ಅಡಿವರೆಗೆ ಹೂಳು ತುಂಬಿರುವ ಸಾಧ್ಯತೆಗಳಿವೆ ಎಂದರು. ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಎಲ್ಲ ಪೂರಕ ಕ್ರಮ ಕೈಗೊಳ್ಳುವಂತೆ ಹಾಗೂ ಇದಕ್ಕೆ ಅವಶ್ಯವಿರುವ ವ್ಯವಸ್ಥೆ ರೂಪಿಸುವಂತೆ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದರು.